ಬೆಂಗಳೂರು, ಜು. 18 : ಮೈತ್ರಿ ಸರ್ಕಾರದ ಅಳಿವು- ಉಳಿವಿನ ಲೆಕ್ಕಾಚಾರ ಇಂದು ನಡೆಯಲಿದ್ದು, ಇಡೀ ದೇಶದ ಕಣ್ಣು ರಾಜ್ಯದ ಶಕ್ತಿಸೌಧದ ಮೇಲಿದೆ. ಮೈತ್ರಿ ಸರ್ಕಾರ ಇಂದು ವಿಶ್ವಾಸ ಮತ ಯಾಚನೆ ಮಾಡಲಿದ್ದು, ಸದನದ ನಿರ್ಣಯ ಮತಕ್ಕೆ ಹಾಕಲಾಗುವುದು ಎಂದು ಸ್ಪೀಕರ್ ರಮೇಶ್ ಕುಮಾರ್ ತಿಳಿಸಿದರು.
ಸದನಕ್ಕೆ ತೆರಳುವ ಮುನ್ನ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿ, ಸದನದಲ್ಲಿ ಹಾಜರಿರುವ ಶಾಸಕರಿಂದ ಬಹುಮತ ನಿರ್ಣಯ ನಡೆಸಲಾಗುವುದು. ಈ ಬಗ್ಗೆ ಯಾರಿಗೆ ತೃಪ್ತಿ ಇದೆಯೋ ಇಲ್ಲವೋ ಗೊತ್ತಿಲ್ಲ. ನಾನಂತೂ ತೃಪ್ತನಾಗಿದ್ದೇನೆ.
ವಿಶ್ವಾಸಮತ ಯಾಚನೆ ವೇಳೆ ಎಲ್ಲಾ ಶಾಸಕರ ಹಾಜರಿ ಅಗತ್ಯವಿಲ್ಲ. ಹಾಜರಿರುವ ಶಾಸಕರ ಮತಗಳನ್ನು ಗಣನೆಗೆ ತೆಗೆದುಕೊಂಡು ಬಹುಮತ ನಿರ್ಣಯ ಮಾಡಲಾಗುವುದು. ಡಿವಿಷನ್ ಬೆಲ್ ರಿಂಗ್ ಆದಮೇಲೆ ಇರುವ ಸಂಖ್ಯೆಯಲ್ಲಿ ಬಹುಮತ ಗಣನೆಗೆ ತೆಗೆದುಕೊಳ್ಳುತ್ತೇವೆ. ಸದನದ ಬಾಗಿಲು ಹಾಕಿದ ನಂತರ ಇರುವ ಶಾಸಕರಲ್ಲಿ ಯಾರು ಸಾಬೀತು ಮಾಡುತ್ತಾರೆ ಅವರಿಗೆ ಬಹುಮತ ಎಂದರು.