ಬಾಗಲಕೋಟೆ, ಆ.6 : ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಾಗಲಕೋಟೆಯ ಗ್ರಾಮಸ್ಥರು ಆಂಜನೇಯನ ಮೊರೆ ಹೋಗಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಟಕ್ಕೋಡ ಗ್ರಾಮಸ್ಥರು ಮಹಾರಾಷ್ಟ್ರದಲ್ಲಿ ಮಳೆ ನಿಲ್ಲಲಿ ಎಂದು ಆಂಜನೇಯನ ಬಳಿ ಬೇಡಿಕೊಂಡಿದ್ದಾರೆ. ಮಹಾ ಮಳೆ ನಿಲ್ಲಲಿ, ಕೃಷ್ಣಾ ನದಿಯ ಪ್ರವಾಹ ತಗ್ಗಲಿ ಎಂದು ಗ್ರಾಮಸ್ಥರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆಂಜನೇಯನಿಗೆ ಕರ್ಪೂರ, ಊದುಬತ್ತಿ ಹಾಗೂ ಕಾಯಿ ಒಡೆದು ಬೇಡಿಕೊಂಡಿದ್ದಾರೆ.
ಜಮಖಂಡಿ ತಾಲೂಕಿನ 15ಕ್ಕೂ ಹೆಚ್ವು ಹಳ್ಳಿಗಳು ಜಲಾವೃತವಾಗಿ, ಅಪಾರ ಪ್ರಮಾಣದ ಕಬ್ಬು ಬೆಳೆ ನಾಶವಾಗಿದೆ. ಜಮಖಂಡಿ ಜತ್ತ ರಾಜ್ಯ ಹೆದ್ದಾರಿ ಬಂದ್ ಆಗಿದ್ದರಿಂದ ಜನರಿಗೆ ಆತಂಕ ಎದುರಾಗಿದೆ.
ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಚಿಕ್ಕಪಡಸಲಗಿ ರಸ್ತೆ ಸೇತುವೆ ವ್ಯಾಪ್ತಿಯಲ್ಲಿ ಸೋಮವಾರದಿಂದಲೇ 144 ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಆದರೂ ಜನ ನಿಷೇಧಾಜ್ಞೆಯನ್ನು ಉಲ್ಲಂಘಿಸುತ್ತಿದ್ದು, ಗುಂಪು ಗುಂಪಾಗಿ ಸೇತುವೆ ಮೇಲೆ ಸಂಚರಿಸುತ್ತಿದ್ದಾರೆ. ಕೃಷ್ಣಾ ನದಿಯಲ್ಲಿ ನಿಷೇಧಾಜ್ಞೆ ಇದ್ದರೂ ಜಲಾಶಯದ ಪಕ್ಕದ ನೀರಲ್ಲಿ ಸ್ಥಳೀಯರು ಈಜಾಡಿದ್ದಾರೆ.