ನವದೆಹಲಿ, ಮಾ.8, ನ್ಯೂಸ್ ಎಕ್ಸ್ ಪ್ರೆಸ್: ಅಯೋಧ್ಯೆ ರಾಮ ಜನ್ಮಭೂಮಿ-ಬಾಬರಿ ಮಸೀದಿ ವಿವಾದವನ್ನು ಮಧ್ಯಸ್ಥಿಕೆ ಮೂಲಕ ಕಾಲಮಿತಿಯಲ್ಲಿ ಬಗೆಹರಿಸಿಕೊಳ್ಳಬೇಕು. ಸಂಧಾನ ಪ್ರಕ್ರಿಯೆ ರಹಸ್ಯವಾಗಿರಬೇಕು. ಸೋರಿಕೆಯಾಗಬಾರದು ಎಂದು ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಇಂದು ಮಹತ್ವದ ಆದೇಶ ನೀಡಿದೆ.
ಅಯೋಧ್ಯೆ ವಿವಾದ ಮಧ್ಯಸ್ಥಿಕೆ ಮೂಲಕ ಇತ್ಯರ್ಥವಾಗಲು ಸುಪ್ರೀಂಕೋರ್ಟ್ ಮೂವರು ಸಂಧಾನಕಾರರ ನೇಮಕ ಮಾಡಿದ್ದು, ಜಸ್ಟಿಸ್ ಇಬ್ರಾಹಿಂ ಖಲೀಫುಲ್ಲಾ ನೇತೃತ್ವದಲ್ಲಿ ಸಂಧಾನ ಪ್ರಕ್ರಿಯೆ ನಡೆಯಲಿದೆ. ಈ ಪ್ರಕ್ರಿಯೆ ಒಂದು ವಾರದೊಳಗೆ ಆರಂಭವಾಗಬೇಕು. ನಾಲ್ಕು ವಾರದಲ್ಲಿ ಸಂಧಾನದ ಫಲಶುೃತಿ ಲಭಿಸಬೇಕು .ಎರಡು ತಿಂಗಳಲ್ಲಿ ಎಲ್ಲ ಪ್ರಕ್ರಿಯೆ ಮುಗಿಯಬೇಕು ಎಂದು ಸುಪ್ರೀಂಕೋರ್ಟ್ ಸೂಚಿಸಿದೆ. ಉತ್ತರಪ್ರದೇಶದ ಫೈಝಾಬಾದ್ನಲ್ಲಿ ಸಂಧಾನ ಪ್ರಕ್ರಿಯೆ ನಡೆಯಲಿದೆ.