ಮಹದೇವಪುರ, ಫೆ. 05: ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಕ್ಯಾನ್ಸರ್ ಕಾಯಿಲೆಯನ್ನು ಪ್ರಾಥಮಿಕ ಹಂತದಲ್ಲಿ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡುವುದರಿಂದ ಗುಣಪಡಿಸಬಹುದು ಎಂದು ಮುಂಬಯಿನ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಉಪ ನಿರ್ದೇಶಕ ಶೈಲೇಂದ್ರ ಶ್ರೀಕಂಡೆ ತಿಳಿಸಿದರು.
ವಿಶ್ವ ಕ್ಯಾನ್ಸರ್ ದಿನಾಚರಣೆಯ ಅಂಗವಾಗಿ ಇಲ್ಲಿನ ವೈದೇಹಿ ಆಸ್ಪತ್ರೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಕ್ಯಾನ್ಸರ್ ಕಾಯಿಲೆಯ ತಡೆಗಟ್ಟುವ ಬಗ್ಗೆ ಅರಿವಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಹಿಳೆಯರಲ್ಲಿ ಸಾಮಾನ್ಯವಾಗಿ ಸ್ತನ ಮತ್ತು ಗರ್ಭಕೋಶದಲ್ಲಿ ಕ್ಯಾನ್ಸರ್ ಕಾಯಿಲೆ ಹೆಚ್ಚಾಗಿ ಕಂಡುಬರುತ್ತದೆ ಎಂದರು.
ಪ್ರಾಥಮಿಕ ಹಂತದಲ್ಲಿ ಸ್ತನ ಭಾಗದಲ್ಲಿ ಗಡ್ಡೆ ಉಂಟಾಗಿ, ಯೋನಿ ಯಲ್ಲಿ ರಕ್ತ ಸ್ರಾವ ಆದರೆ ಕ್ಯಾನ್ಸರ್ ಕಾಯಿಲೆ ಎಂದು ಪರಿಗಣಿಸಲಾಗುತ್ತದೆ ಎಂದರು.
ಗರ್ಭಕೋಶ ಕ್ಯಾನ್ಸರ್ ವೈರಸ್ ಸೋಂಕು ನಿಂದ ಹರಡಲಿದ್ದು ಚುಚ್ಚುಮದ್ದು ತೆಗೆದುಕೊಳ್ಳುವುದ ರಿಂದ ಹತೋಟಿಗೆ ತರಲಾಗುವುದು ಎಂದು ಹೇಳಿದರು.
ವೈದೇಹಿ ಆಸ್ಪತ್ರೆಯ ಕ್ಯಾನ್ಸರ್ ತಜ್ಞರಾದ ಡಾ.ಗೀತಾ ನಾರಾಯಣ್ ಮಾತನಾಡಿ, ಮಹಿಳೆಯರು ಮುಚ್ಚುಮರೆಯಿಲ್ಲದೆ ಸ್ತನಿಗಳಲ್ಲಿ ಗಡ್ಡೆ ಗೋಚರಿಸಿದೆ ತಪಾಸಣೆ ಗೆ ಒಳಗಾದರೆ ಕ್ಯಾನ್ಸರ್ ಕಾಯಿಲೆ ಗುಣಪಡಿಸಬಹುದು ಎಂದು ಹೇಳಿದರು.
ತಂಬಾಕು ಉತ್ಪನ್ನಗಳ ಸೇವನೆಯಿಂದ ಆಗುವ ಹಾನಿಗಿಂತ ಡಾಂಬರು ಹಾಕುವ ಸಂದರ್ಭದಲ್ಲಿ ಟಾಕ್ಸಿಕ್ ಕೆಮಿಕಲ್ಗಳ ವಾಸನೆ ಹೀರುವ ಕಾರ್ಮಿಕರಿಗೆ ತೊಂದರೆ ಹೆಚ್ಚು. ಇವರಿಗೆ ಬಹುಬೇಗ ಕ್ಯಾನ್ಸರ್ ಬರುತ್ತದೆ. ಆದರೆ, ತಂಬಾಕು ಉತ್ಪನ್ನಗಳ ಬಳಕೆ ಪ್ರಮಾಣ ಹೇರಳವಾಗಿರುವುದ ರಿಂದ ಕ್ಯಾನ್ಸರ್ಗೆ ತುತ್ತಾಗುವ ಜನರ ಪ್ರಮಾಣವೂ ಹೆಚ್ಚಾಗಿದೆ ಎಂದು ವಿವರಿಸಿದರು.
ಈ ಸಂದರ್ಭದಲ್ಲಿ ನರರೋಗ ತಜ್ಞೆ ಡಾ.ಉಮಾ ನಂಬಿಯಾರ್, ವೈದೇಹಿ ಆಸ್ಪತ್ರೆಯ ಕ್ಯಾನ್ಸರ್ ಮುಖ್ಯ ತಜ್ಞ ಡಾ.ಗಣೇಶ್, ವೈದೇಹಿ ಡೀನ್ ಪ್ರಭಾಕರ್ ಸೇರಿದಂತೆ ಇತರರು ಹಾಜರಿದ್ದರು.