ಬೆಂಗಳೂರು, ಮೇ.11, ನ್ಯೂಸ್ ಎಕ್ಸ್ ಪ್ರೆಸ್: ನಿವೃತ್ತ ಅರಣ್ಯಾಧಿಕಾರಿಯಿಂದ ಹಣ ಕೊಡಿಸುವಂತೆ ಒತ್ತಾಯಿಸಿ ವಿಧಾನಸೌಧ ಎದುರು ನಿನ್ನೆ ಕುಟುಂಬವೊಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಬನ್ನೇರುಘಟ್ಟದ ರಾಗಿಹಳ್ಳಿ ನಿವಾಸಿ ವಿಶ್ವನಾಥ್ ರೆಡ್ಡಿ, ಪತ್ನಿ ನಾಗರತ್ನ, ಪುತ್ರ ಸಂಜಯ್ ಆತ್ಮಹತ್ಯೆಗೆ ಯತ್ನಿಸಿದವರು. ವಿಧಾನಸೌಧದ ಅಂಬೇಡ್ಕರ್ ಪ್ರತಿಮೆ ಮುಂದೆ ನಿಂತು ವಿಶ್ವನಾಥ್ ಕುಟುಂಬ ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದೆ. ಇದನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಡೀಸೆಲ್ ಕ್ಯಾನ್ ವಶಕ್ಕೆ ಪಡೆದು ವಿಶ್ವನಾಥ್, ಪತ್ನಿ ಮತ್ತು ಮಗನನ್ನು ಠಾಣೆಗೆ ಕರೆದೊಯ್ದಿದ್ದಾರೆ. ಈ ವೇಳೆ ಪೊಲೀಸರು ವಿಶ್ವನಾಥ್ ರನ್ನು ವಿಚಾರಣೆ ನಡೆಸಿದಾಗ ಆತ ತನಗಾದ ಮೋಸವನ್ನು ವಿವರಿಸಿದ್ದಾರೆ. 2008 ರಲ್ಲಿ ಸತ್ಯನಾರಾಯಣ್ ಬನ್ನೇರುಘಟ್ಟದ ಅರಣ್ಯಾಧಿಕಾರಿಯಾಗಿದ್ರು. ಆಗ ತನ್ನ ಬಳಿ ಟ್ರ್ಯಾಕ್ಟರ್ ಇದ್ದು, ಅದನ್ನು ಬಾಡಿಗೆಗೆ ಬಿಡುತ್ತಿದ್ದೆ. ಈ ಸಂದರ್ಭದಲ್ಲಿ ಅರಣ್ಯ ಪ್ರದೇಶದಲ್ಲಿ ಕಾವಲು ಗೋಪುರ ಕಟ್ಟಲು ನೀಲಗಿರಿ ಮರಗಳನ್ನು ಕಡಿದು ಬೇರೆಡೆ ಸಾಗಿಸುವಾಗ ಟ್ರ್ಯಾಕ್ಟರ್ ಪಲ್ಟಿಯಾಗಿ, ಅದರಲ್ಲಿದ್ದ ಹರಿಪ್ರಸಾದ್ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದ. ಈ ವೇಳೆ ಸತ್ಯನಾರಾಯಣ್ ಗಾಯಗೊಂಡಿದ್ದ ಹರಿಪ್ರಸಾದ್ ನನ್ನು ಆಸ್ಪತ್ರೆಗೆ ದಾಖಲಿಸಿದ್ರು. ಅಲ್ಲದೆ ಆತನ ಚಿಕಿತ್ಸೆಗೆ 15 ಲಕ್ಷ ಬೇಕಿದ್ದು, ಈಗ ನೀವು ಕೊಡಿ, ಆಮೇಲೆ ಕೊಡಿಸುವುದಾಗಿ ವಿಶ್ವನಾಥ್ಗೆ ಹೇಳಿದ್ರು. ಹೀಗಾಗಿ ಜಮೀನು ಮಾರಿ ವಿಶ್ವನಾಥ್ ಹಣ ಕೊಟ್ಟಿದ್ರು. ಆದ್ರೆ ಸತ್ಯನಾರಾಯಣ್ ಇದೂವರೆಗೂ ಹಣ ಹಿಂದಿರುಗಿಸಿಲ್ಲ. ಇದ್ರಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾಗಿ ವಿಶ್ವನಾಥ್ ತಿಳಿಸಿದ್ದಾರೆ.