ರಾಯಚೂರು, ಅ. 19: ಒಂದೆಡೆ ಅಕ್ರಮ ಮರಳುಗಾರಿಕೆ ಜೋರಾಗಿದ್ದರೆ, ಇನ್ನೊಂದೆಡೆ ಮರಳುಗಾರಿಕೆ ನಡೆಸುವವರಿಂದ ಪೊಲೀಸರ ಮಾಮೂಲಿ ವಸೂಲಿ ದಂಧೆ ಮಿತಿ ಮೀರಿದೆ. ಮಾಮೂಲಿ ಕೊಡಲು ತಡವಾಗಿದ್ದಕ್ಕೆ ರಾಯಚೂರಿನ ಯರಗೇರಾ ಠಾಣಾ ಪೊಲೀಸರು ಟ್ರ್ಯಾಕ್ಟರ್ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಾರೆ.
ಪೊಲೀಸ್ ಪೇದೆಗಳಿಂದ ಹಿಡಿದು ಪಿಎಸ್ಐ, ಸಿಪಿಐವರೆಗೆ ದುಡ್ಡು ಹಂಚಿಕೊಳ್ಳಲು ವಾರ, ತಿಂಗಳಿಗೆ ಇಷ್ಟು ಎಂದು ಫಿಕ್ಸ್ ಮಾಡಿ ಮಾಮೂಲಿಯನ್ನು ಪೀಕುತ್ತಿದ್ದಾರೆ. ಮರಳು ಸಾಗಿಸುತ್ತಿದ್ದ ಬಾಯಿದೊಡ್ಡಿ ಗ್ರಾಮದ ಭೀಮಾಶಂಕರ ಎಂಬಾತನಿಗೆ 60 ಸಾವಿರ ರೂಪಾಯಿ ಮಾಮೂಲಿ ನೀಡುವಂತೆ ಪೊಲೀಸರು ಕಿರುಕುಳ ನೀಡಿದ್ದಾರೆ. ಆದರೆ ಟ್ರ್ಯಾಕ್ಟರ್ ಮಾಲೀಕ ಇದಕ್ಕೆ ಒಪ್ಪಲಿಲ್ಲ. ಬಳಿಕ ಪೊಲೀಸರು 20 ಅಥವಾ 25 ಸಾವಿರ ರೂ. ಹಣ ನೀಡುವಂತೆ ಕೇಳಿದ್ದಾರೆ. ಭೀಮಾಶಂಕರ್ ಹಣ ನೀಡಲು ತಡ ಮಾಡಿದ್ದಕ್ಕೆ ಪೊಲೀಸರು ಆತನ ಮೇಲೆ ಹಲ್ಲೆ ಮಾಡಿದ್ದಾರೆ.