ಕೆ.ಆರ್.ಪುರ, ನ. 26: ಹೆಚ್.ಎ.ಎಲ್ ಪೊಲೀಸ್ ಠಾಣಾ ಸರಹದ್ದಿನ ಎಲ್.ಬಿ.ಎಸ್ ನಗರದ ಇಸ್ಲಾಂಪುರದ ಖಾಲಿ ಜಾಗದಲ್ಲಿ ವ್ಯಕ್ತಿಯೊಬ್ಬ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾನೆಂಬ ಖಚಿತ ಮಾಹಿತಿ ಪಡೆದು ಪೋಲೀಸರು ದಾಳಿ ನಡೆಸಿ ಮುನವರ್ ಪಾಷ (24) ಎಂಬ ಆರೋಪಿಯನ್ನು ಬಂಧಿಸಿ ಆರೋಪಿಯಿಂದ ಸುಮಾರು 2 ಕೆ.ಜಿ 100 ಗ್ರಾಂ ತೂಕದ ಗಾಂಜಾವನ್ನು ವಶಪಡಿಸಿಕೊಂಡಿರುವುದಾಗಿ ಹೆಚ್.ಎ.ಎಲ್ ಪೋಲಿಸ್ ಠಾಣಾಧಿಕಾರಿ ಎಂ.ಎ.ಮೊಹಮ್ಮದ್ ಅವರು ತಿಳಿಸಿದರು.
ಆರೋಪಿ ಮುನವರ್ ಪಾಷ ಆಂದ್ರಪ್ರದೇಶ್ ವೈಜಾಗ್ ಸಮೀಪದ ಅರಕು ವೇಲಿ ಗ್ರಾಮದ ಸುತ್ತಮುತ್ತಲ ಬೆಟ್ಟ ಹಾಗೂ ಅರಣ್ಯ ಪ್ರದೇಶಗಳಲ್ಲಿ ಬೆಳೆದಿರುವ ಗಾಂಜಾವನ್ನು ಅಲ್ಲಿಗೆ ಹೋಗಿ ಖರೀದಿಸಿ ತರುತ್ತಿದ್ದನೆಂದು ತಿಳಿದು ಬಂದಿದೆ ಎಂದರು.
ಈ ಭಾಗದಲ್ಲಿ ಚಾಪ್ರಾಯ್ ಜಲಪಾತ ಇದ್ದು ಇಲ್ಲಿಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬಂದು ಹೋಗುತ್ತಿದ್ದು, ಇವರನ್ನು ಕೇಂದ್ರೀಕರಿಸಿ ಗಾಂಜಾ ದಂಧೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ ಎಂದರು.
ಅಲ್ಲಿ ಒಂದು ಕೆಜಿ ಗಾಂಜಾ ಕೇವಲ 5000/ ರೂ ಗಳಿಗೆ ಲಭ್ಯವಾಗುತ್ತಿದ್ದು, ಅದನ್ನು ಬೆಂಗಳೂರಿಗೆ ತಂದು 15 ರಿಂದ 20 ಸಾವಿರ ರೂ.ಗಳಿಗೆ ಮಾರಾಟ ಮಾಡುತ್ತಿದ್ದನೆಂದು ತಿಳಿದುಬಂದಿದೆ ಎಂದರು.
ಆರೋಪಿಯ ಅಣ್ಣ ಮುಬಾರಕ್ ಪಾಷಾ ಸಹ ಇದೇ ರೀತಿ ಮಾದಕ ದ್ರವ್ಯಗಳ ವ್ಯವಹಾರದಲ್ಲಿ ಸಕ್ರಿಯನಾಗಿದ್ದು, ಈತನ ವಿರುದ್ಧ HAL ಠಾಣೆಯಲ್ಲಿಯೂ ಪ್ರಕರಣವಿದೆ ಎಂದರು.
ಅಲ್ಲದೆ ಇತ್ತೀಚೆಗೆ ಕೆ.ಜಿ ಹಳ್ಳಿ ಪೊಲೀಸ್ ಠಾಣೆಯಲ್ಲಿ ಈತನನ್ನು ಬಂಧಿಸಲಾಗಿದ್ದು, ಈತನಿಂದ ಸಹ ಅಪಾರ ಪ್ರಮಾಣದ ಗಾಂಜಾ ಹಾಗೂ ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಪಡಿಸಿ ಕೊಂಡಿರುವುದಾಗಿ ತಿಳಿದು ಬಂದಿದೆ ಎಂದರು.
ಈ ಕಾರಚರಣೆಯನ್ನು ಮಾರತ್ತಹಳ್ಳಿ ಉಪ ವಿಭಾಗದ ಎ.ಸಿ.ಪಿ.ಪಂಪಾಪತಿ ರವರ ನೇತೃತ್ವದಲ್ಲಿ ಹಾಗೂ ಠಾಣೆಯ ಸಿಬ್ಬಂದಿ ಆರೋಪಿಯನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ ಎಂದರು.
ಈ ಕಾರ್ಯಾಚರಣೆಯನ್ನು ವೈಟ್ ಫೀಲ್ಡ್ ವಿಭಾಗದ ಡಿ.ಸಿ.ಪಿ ಅನುಚೇತ್ ಅವರು ಅಭಿನಂದಿಸಿದ್ದಾರೆ ಎಂದು ತಿಳಿಸಿದರು.