ಹುಬ್ಬಳ್ಳಿ, ಫೆ. 17: ಪಾಕ್ ಪರ ಘೋಷಣೆ ಕೂಗಿದ್ದ ಕೆಎಲ್ಇ ಕಾಲೇಜಿನ 3 ಕಾಶ್ಮೀರಿ ವಿದ್ಯಾರ್ಥಿಗಳನ್ನು ನಿನ್ನೆಯಷ್ಟೇ ಬಿಡುಗಡೆ ಮಾಡಿದ್ದ ಪೊಲೀಸರು ತಡರಾತ್ರಿ ಮತ್ತೆ ಬಂಧಿಸಿದ್ದಾರೆ.
ಕಾಶ್ಮೀರಿ ಮೂಲಕ ಅಮೀರ್, ಬಾಸಿತ್, ತಾಲೀಬ್ ಮೂವರನ್ನು ಬಂಧಿಸಿದ್ದು, ಸಿಆರ್ಪಿಸಿ ಬಾಂಡ್ ಮೇಲೆ ಬಿಡುಗಡೆ ಮಾಡಲಾಗಿತ್ತು ಎಂದು ನಿನ್ನೆಯಷ್ಟೇ ಹುಬ್ಬಳ್ಳಿ ಧಾರವಾಡ ಆಯುಕ್ತರು ಹೇಳಿದ್ದರು. ಪೊಲೀಸರ ಈ ನಡೆಗೆ ದೊಡ್ಡ ಆಕ್ರೋಶ ವ್ಯಕ್ತವಾಗಿತ್ತು. ಬಿಜೆಪಿ, ಕಾಂಗ್ರೆಸ್ ಸೇರಿದಂತೆ ರಾಜಕೀಯ ಪಕ್ಷಗಳ ಮುಖಂಡರು, ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಹೀಗಾಗಿ ತಡರಾತ್ರಿ ಮತ್ತೆ ಗೋಕುಲ್ ರೋಡ್ ಪೊಲೀಸರು ಆರೋಪಿಗಳನ್ನು ಬಂಧಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರು ಪಡಿಸಿದ್ದಾರೆ.
ಇನ್ನು ನಿನ್ನೆ CRPC 169 ಬಾಂಡ್ ಮೇಲೆ ಗೋಕುಲ್ ರೋಡ್ ಠಾಣೆ ಪೊಲೀಸರು ಮೂವರು ವಿದ್ಯಾರ್ಥಿಗಳನ್ನ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಿದ್ದರು. ಪೊಲೀಸರ ವಿಚಾರಣೆಗೆ ಸಹಕಾರ ನೀಡುವಂತೆ ಬಾಂಡ್ ಪತ್ರದಲ್ಲಿ ಬರೆಸಿಕೊಂಡು ಬಿಡುಗಡೆ ಮಾಡಲಾಗಿತ್ತು. ಈ ವಿಚಾರಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಆರೋಪಿಗಳನ್ನು ಮತ್ತೆ ಬಂಧಿಸಲಾಗಿದೆ.