ಹೊಸಕೋಟೆ, ನ. 19: ಮೂವತ್ತು ವರ್ಷದ ಹಿಂದೆ ಇದ್ದ ರಾಜಕೀಯ ಪರಿಸ್ಥಿತಿ ಮತ್ತೆ ನಿರ್ಮಾಣವಾಗುತ್ತಿದ್ದು, ಅದಕ್ಕೆ ಅನರ್ಹ ಶಾಸಕರು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಬೈರತಿ ಸುರೇಶ್ ಹೇಳಿದ್ದಾರೆ.
ಹೊಸಕೋಟೆಯ ಕಾಂಗ್ರೇಸ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಹೆಬ್ಬಾಳ ಶಾಸಕ ಬೈರತಿ ಸುರೇಶ್ ಮಾತನಾಡಿದರು. ಕುರುಬ ಸಂಘದಿಂದ ಎಚ್ಚರಿಕೆ ನೀಡುರುವ ಬಗ್ಗೆ ಪ್ರತಿಕ್ರಿಯಿಸುತ್ತಾ, ಹೊಸಕೋಟೆ ಕುರುಬರ ಸಂಘ ಹಾಗೂ ರಾಜ್ಯ ಕುರುಬ ಸಂಘದಲ್ಲಿ ರಾಜಕಾರಣ ಬೆರೆಸಬೇಡಿ ಎಂದು ನಾನು ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಒಂದು ಜಾತಿಯಿಂದ ಒಬ್ಬ ನಾಯಕನಿಗೆ ಬೆಂಬಲ ನೀಡುವುದು ಸರಿಯಲ್ಲ. ಸಿದ್ದರಾಮಯ್ಯನವರ ಬಗ್ಗೆ ಬೇರೆ ಪಕ್ಷದವರು ಮಾತನಾಡುವಾಗ ಅವರಿಗೂ ಎಚ್ಚರಿಕೆ ನೀಡಲಿ. ಯಾವುದೇ ಜಾತಿ, ಜನಾಂಗವನ್ನು ರಾಜಕಾರಣಕ್ಕೆ ಬಳಸಿಕೊಳ್ಳವುದಾಗಲೀ, ಎಚ್ಚರಿಕೆ ನೀಡುವುದಾಗಲೀ ಸರಿಯಲ್ಲ. ಅವರವರ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಲು ಎಲ್ಲರೂ ಸ್ವತಂತ್ರರು. ಎಂಟಿಬಿ ನಾಗರಾಜ್ ಅವರ ಅಭಿಪ್ರಾಯ ಹೇಳಲಿ. ಯಾವುದು ಸರಿ ಯಾವುದು ತಪ್ಪು ಎಂದು ಹೊಸಕೋಟೆ ಕ್ಷೇತ್ರದ ಜನ ಡಿಸೆಂಬರ್ ಐದನೇ ತಾರೀಖು ಜನ ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು
ಹೊಸಕೋಟೆ ಕ್ಷೇತ್ರದಲ್ಲಿ ಹಣಬಲ ತೋಳ್ಬಲ ಜೋರಾಗಿ ನಡೆಯುತ್ತಿದೆ. ಇಂತಹ ಪರಿಸ್ಥಿತಿ ಉದ್ಭವವಾಗಲು ಅನರ್ಹ ಶಾಸಕರೇ ಕಾರಣ ಎಂದು ಆರೋಪಿಸಿದ ಬೈರತಿ ಮಹಿಳೆಯಿಂದ ಕ್ಷೇತ್ರದ ಅಭಿವೃದ್ಧಿ ಸಾಧ್ಯವಿಲ್ಲ ಎಂಬ ಎಂಟಿಬಿಯವರ ಟೀಕೆಗೆ ಪ್ರತಿಕ್ರಿಯಿಸಿ, ಮಹಿಳೆಯರ ಬಗ್ಗೆ ಅಪಮಾನಕಾರಿಯಾಗಿ ಮಾತಾನಾಡುವ ಎಂಟಿಬಿ ನಾಗರಾಜು ಹಾಗೂ ಅವರ ಸಹಚರರ ವಿಚಾರವನ್ನ ಮತದಾರರಿಗೆ ಬಿಡೋಣ. ಎಂಟಿಬಿಯ ತಾಯಿ, ನಮ್ಮ ಭಾರತಾಂಬೆ ಹೆಣ್ಣು ಎಂದು ಎಂಟಿಬಿ ಮರೆಯದಿರಲಿ. ಈ ಮಾತಿಗೆ ಕ್ಷೇತ್ರದ ಮಹಿಳಾ ಮತದಾರರು ಉತ್ತರ ನೀಡುತ್ತಾರೆ ಎಂದರು.
ಉನ್ನತಸ್ತರದಲ್ಲಿ ಸೇವೆ ಸಲ್ಲಿಸಿದ ಮಹಿಳೆಯರು ನಮ್ಮ ದೇಶದಲ್ಲಿದ್ದಾರೆ. ಮಹಿಳೆಯರನ್ನ ಜರಿಯಬೇಡಿ, ಹೆಣ್ಣಿನ ಬಗ್ಗೆ ಯಾರು ತುಚ್ಛವಾಗಿ ಮಾತನಾಡಬೇಡಿ ಎಂದು ಎಂಟಿಬಿ ನಾಗರಾಜ್ ಅವರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದರು.