ಕಲಬುರಗಿ, ಏ. 3, ನ್ಯೂಸ್ ಎಕ್ಸ್ ಪ್ರೆಸ್: ಅಕ್ರಮವಾಗಿ ಪಕ್ಕದ ಮಹಾರಾಷ್ಟ್ರಕ್ಕೆ ರವಾನಿಸಲು ಪಡಿತರ ಅಕ್ಕಿಯನ್ನು ಮನೆಯಲ್ಲಿ ಸಂಗ್ರಹಿಸಿಟ್ಟ ಮಾಹಿತಿ ತಿಳಿದ ಅಧಿಕಾರಿಗಳು ಮನೆ ಮೇಲೆ ದಾಳಿ ನಡೆಸಿ, ಐವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆಳಂದ ಪಟ್ಟಣದ ವಿದ್ಯಾನಗರ ನಿವಾಸಿಗಳಾದ ಇಸ್ಮಾಯಿಲ್ ಇಬ್ರಾಹಿಂ ಮುಲ್ಲಾ ಮತ್ತು ಅಂಬಣ್ಣ ಕೋಣೆ ಎಂಬುವರ ಮನೆಯಲ್ಲಿ ಸಂಗ್ರಹಿಸಿಟ್ಟಿರುವ ಬಗ್ಗೆ ಮಾಹಿತಿ ಪಡೆದ ತಹಶೀಲ್ದಾರ್ ಎಂ.ಎನ್.ಚೋರಬಸ್ತೆ, ಆಹಾರ ಇಲಾಖೆಯ ನಿರೀಕ್ಷಕ ಪ್ರವೀಣ್, ಪಿಎಸ್ಐ ಮಹಾಂತೇಶ ದಾಳಿ ನಡೆಸಿ ಸಂಗ್ರಹಿಸಿಟ್ಟಿದ್ದ ಅಕ್ಕಿ ವಶಕ್ಕೆ ಪಡೆದಿದ್ದಾರೆ.
ಚಾಲಾಕಿಗಳು ಆಹಾರ ಇಲಾಖೆಯ ಚೀಲಗಳಿಂದ ಅಕ್ಕಿ ಹೊರತೆಗೆದು ಬೇರೆ ಚೀಲದಲ್ಲಿ ತುಂಬಿ ಸಂಗ್ರಹಿಸಿಟ್ಟಿದ್ದರು. ಪಡಿತರ ವಿತರಣೆ ಮಾಡಬೇಕಿದ್ದ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಸಾಕಷ್ಟು ದೂರುಗಳು ಸಹ ಇದ್ದವು. ಸದ್ಯ ಸಂಗ್ರಹಿಸಿದ್ದ ಅಕ್ಕಿಯನ್ನು ವಶಕ್ಕೆ ಪಡೆದ ಅಧಿಕಾರಿಗಳು ಮರಳಿ ಆಹಾರ ಇಲಾಖೆಯ ವಶಕ್ಕೆ ಒಪ್ಪಿಸಿದ್ದಾರೆ. ಇಸ್ಮಾಯಿಲ್ ಇಬ್ರಾಹಿಂ ಮುಲ್ಲಾ, ಅಂಬಣ್ಣ ಕೊಣೆ, ಶಿವಾನಂದ ಜಮಾದಾರ್, ರಾಜೇಂದ್ರ ಜಮಾದಾರ್, ಮೈನೆದಿನ್ ಎಂಬ ಐವರ ವಿರುದ್ಧ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.