ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲವಂತಾಗಿದೆ ಅಮಿತ್‌ ಶಾ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲವಂತಾಗಿದೆ ಅಮಿತ್‌ ಶಾ

ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದ ಲೋಕಸಭಾ ಚುನಾವಣೆಗೆ ಮೂರು ದಿನ ಬಾಕಿ ಉಳಿದಿರುವಂತೆ ಕೇಂದ್ರ ಗೃಹಸಚಿವ ಅಮಿತ್‌ ಶಾ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಪರವಾಗಿ ನಿನ್ನೆ ಬೃಹತ್‌ ರೋಡ್‌ ಶೋ ನಡೆಸಿದರು. ಬೊಮ್ಮನಹಳ್ಳಿಯ ವಿವೇಕಾನಂದ ಸರ್ಕಲ್​ನಿಂದ ಪ್ರಾರಂಭವಾಗಿ ಐಐಎಂಬಿ ಬನ್ನೇರುಘಟ್ಟ ವರೆಗೆ ರೋಡ್ ಶೋ ಸಾಗಿತು.

ಈ ಸಂದರ್ಭದಲ್ಲಿ ಮಾತನಾಡಿದ ಅಮಿತ್‌ ಶಾ, ಕರ್ನಾಟಕದಲ್ಲಿ ಲೂಟಿಕೋರ, ಓಲೈಕೆಯ, ಸ್ವಜನಪಕ್ಷಪಾತದ ಕಾಂಗ್ರೆಸ್‌ ಸರ್ಕಾರದಿಂದ ಜನರು ರೋಸಿ ಹೋಗಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲವಾಗಿ ಸಮಾಜಘಾತುಕ ಶಕ್ತಿಗಳ, ಮತೀಯವಾದಿಗಳ ಮೆರೆದಾಟ ಹೆಚ್ಚಾಗಿದೆ. ಶಾಂತಿಗೆ ಹೆಸರಾದ ನಾಡಿನಲ್ಲಿ ಕೊಲೆ, ರಕ್ತಪಾತ, ಭಯೋತ್ಪಾದಕ ಚಟುವಟಿಕೆಗಳೂ ಹೆಚ್ಚಾಗುತ್ತಿವೆ. ಕಾಂಗ್ರೆಸ್​ಗೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿರುವ ಎಸ್‌ಡಿಪಿಐ ಬೆಂಬಲವಿದೆ. ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿರುವವರನ್ನು ಅದರ ಹಿಂದಿರುವವರನ್ನು ಕಾಂಗ್ರೆಸ್‌ ಪೋಷಿಸುತ್ತಿದೆ. ಇದು ದೇಶಕ್ಕೆ ಮತ್ತು ರಾಜ್ಯದ ಸುರಕ್ಷತೆಗೆ ದೊಡ್ಡ ಬೆದರಿಕೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.

“ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ದೇಶ ಪ್ರಗತಿ ಪಥದತ್ತ ಸಾಗಿದ್ದು, ಅವರ ಕೈ ಬಲಪಡಿಸಿದರೆ ದೇಶ ಸುಭದ್ರವಾಗಿರುತ್ತದೆ. ಭಯೋತ್ಪಾದನೆ ವಿಷಯದಲ್ಲಿ ಶೂನ್ಯ ಸಹಿಷ್ಣುತೆ ಹೊಂದಿರುವ ಸರ್ಕಾರ, ದೇಶದ ಹೊರಗೂ ನುಗ್ಗಿ ಭಯೋತ್ಪಾದಕರನ್ನು ನಿರ್ನಾಮ ಮಾಡುವ ಸಾಹಸ ತೋರಿದೆ. ಸರ್ಜಿಕಲ್‌ ಸ್ಟ್ರೈಕ್‌ ಮತ್ತು ಏರ್‌ ಸ್ಟ್ರೈಕ್​​ಗಳಿಂದ ಭಯೋತ್ಪಾದಕ ಗುಂಪುಗಳು ಮತ್ತು ಶತ್ರು ರಾಷ್ಟ್ರಗಳು ಹೆದರಿವೆ. ಸರ್ಕಾರ ತೆಗೆದುಕೊಂಡ ಕಠಿಣ ಕ್ರಮಗಳಿಂದ ದೇಶದಲ್ಲಿ ನಕ್ಸಲೀಯ ಚಟುವಟಿಕೆಗಳಲ್ಲೂ ಶೇ.75 ರಷ್ಟು ಕಡಿಮೆಯಾಗಿದ್ದು, ಈ ಹಾವಳಿಯ ಸಂಪೂರ್ಣ ನಿಗ್ರಹ ದೂರವಿಲ್ಲ“ ಎಂದರು.

ಕಳೆದ ಐದು ವರ್ಷಗಳಿಂದ ಬೆಂಗಳೂರು ದಕ್ಷಿಣದಲ್ಲಿ ಉತ್ತಮ ಕೆಲಸ ಮಾಡಿರುವ ತೇಜಸ್ವಿ ಸೂರ್ಯ ಅವರನ್ನು ಮತ್ತೊಮ್ಮೆ ಆಶೀರ್ವದಿಸುವಂತೆ ಮನವಿ ಮಾಡಿದ ಅಮಿತ್‌ ಶಾ, ರಾಜ್ಯದಲ್ಲಿ ಎಲ್ಲ 28 ಕ್ಷೇತ್ರಗಳನ್ನು ಎನ್‌ಡಿಎ ಮೈತ್ರಿಕೂಟ ಗೆಲ್ಲಲಿದೆ.” ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಪ್ರತಿಪಕ್ಷದ ನಾಯಕ ಆರ್ ಅಶೋಕ್, ಶಾಸಕರಾದ ಸಿ ಕೆ ರಾಮಮೂರ್ತಿ, ಸತೀಶ್ ರೆಡ್ಡಿ ಸೇರಿದಂತೆ ಇತರ ಮುಖಂಡರು ಉಪಸ್ಥಿತರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos