ಮಾ.29, ನ್ಯೂಸ್ ಎಕ್ಸ್ ಪ್ರೆಸ್: ಮೆಟ್ರೊ ಸ್ಮಾರ್ಟ್ ಕಾರ್ಡ್ ನಲ್ಲಿ ಕನಿಷ್ಟ 50 ರೂಪಾಯಿ ಹಣ ಮೆಟ್ರೋ ಪ್ರವೇಶಕ್ಕೆ ಇಟ್ಟುಕೊಳ್ಳಬೇಕಂಬ ಕಡ್ಡಾಯ ಜನವಿರೋಧಿ ನಿಯಮವನ್ನು ವಿರೋಧಿಸಿ.ವಿ ಕೃಷಿಕ್ ಮತ್ತು ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಕಾರ್ಯಕರ್ತರು ಇಂದು ಟೌನ್ ಹಾಲ್ ಎದುರು ಪ್ರತಿಭಟನೆ ನಡೆಸಿದ್ದಾರೆ..
ಈ ಮುಂಚೆ ಕನಿಷ್ಠ 10 ರೂ.ಇದ್ದರೂ ಕೂಡ ಪ್ರವೇಶ ಸಾಧ್ಯವಿತ್ತು. ಈ ಜನವಿರೋಧಿ ಆದೇಶದಿಂದ ಬಹಳಷ್ಟು ತೊಂದರೆಯಾಗಲಿದೆ.
ಈ ಆದೇಶ ಜಾರಿಯಾಗಿನಿಂದ ಕನಿಷ್ಠ 50 ರೂ ಹಣ ಇಲ್ಲದ ಕಾರಣಕ್ಕಾಗಿ ಸಾವಿರಾರು ಜನ ತೊಂದರೆಗೀಡಾಗಿ ಪರದಾಡುವಂತಾಗಿದೆ. ಈ ನಿಯಮ ಯಾವ ದೃಷ್ಟಿಯಿಂದಲೂ ಜಾರಿಯೋಗ್ಯವಲ್ಲ. ಹಾಗಾಗಿ ಈ ನಿಯಮ ಕೈ ಬಿಟ್ಟು ಮುಂಚೆ ಇದ್ದ ನಿಯಮವನ್ನೇ ಜಾರಿಗೊಳಿಸಬೇಕೆಂದು ಒತ್ತಾಯಿಸಲಾಯಿತು.
ಪ್ರತಿನಿತ್ಯ ರೈಲಿನಲ್ಲಿ ಸಂಚರಿಸುವ ಕಚೇರಿ ಸಿಬ್ಬಂದಿಗಳು ತಿಂಗಳಿಗೊಮ್ಮೆ ಸ್ಮಾರ್ಟ್ ಕಾರ್ಡ್ ರೀಚಾರ್ಜ್ ಮಾಡಿಸುವುದರಿಂದ ಅಷ್ಟೇನೂ ಪರಿಣಾಮ ಬೀರುವುದಿಲ್ಲ. ಆದರೆ, ಪ್ರತಿನಿತ್ಯ ಸಂಚರಿಸದ ಪ್ರಯಾಣಿಕರು ಹೊಸ ಕ್ರಮದಿಂದಾಗಿ ತೀವ್ರ ತೊಂದರೆ ಎದುರಿಸುವಂತಾಗಿದೆ.
ಹೊಸ ನಿಯಮ ಬೆಂಗಳೂರಿನ ಎಲ್ಲಾ 40 ಮೆಟ್ರೋ ನಿಲ್ದಾಣಗಳಲ್ಲಿ ಗುರುವಾರದಿಂದ ಜಾರಿಗೆ ಬಂದಿದ್ದು, ಸ್ಮಾರ್ಟ್ ಕಾರ್ಡ್ ನಲ್ಲಿ ( ವಾರ್ಷಿಕ ಕಾರ್ಡ್ ) ಒಮ್ಮೆ ರೈಲಿನಲ್ಲಿ ಸಂಚರಿಸಲು ಶೇ, 15 ರಷ್ಟು ರಿಯಾಯಿತಿ ನೀಡಲಾಗುತ್ತದೆ. ಬಹುತೇಕ ಮೆಟ್ರೋ ಪ್ರಯಾಣಿಕರು ಟೋಕನ್ ಪಡೆದು ಸಂಚರಿಸುತ್ತಾರೆ.
ಪ್ರಾಜೆಕ್ಟ್ ಎಂಜಿನಿಯರ್ ಎಂ ಕಾವ್ಯ ಎಂಬವರ ಸ್ಮಾರ್ಟ್ ಕಾರ್ಡ್ ನಲ್ಲಿ ಕನಿಷ್ಠ 50 ರೂಪಾಯಿ ಇಲ್ಲದಿದುದ್ದರಿಂದ ಎಎಫ್ ಸಿ ಗೇಟ್ ಗಳು ತೆರೆಯಲೇ ಇಲ್ಲ. ಇದರಿಂದಾಗಿ ಭಾರೀ ಜನಸಂದಣಿಯಿಂದ ಕೂಡಿದ್ದ ಕ್ಯೂ ನಲ್ಲಿ ನಿಂತು ಕೊನೆಗೆ ರೀಚಾರ್ಜ್ ಮಾಡಿಸಿಕೊಳ್ಳಬೇಕಾಯಿತು.
ಈ ಹಿಂದೆ ಜೆಪಿ ನಗರದಿಂದ ಕಬ್ಬನ್ ಪಾರ್ಕ್ ವರೆಗೂ ಒಂದು ಬಾರಿ ಸಂಚರಿಸಲು 29 ರೂ. ವೆಚ್ಚವಾಗುತಿತ್ತು. ಈಗ ಸ್ಮಾರ್ಟ್ ಕಾರ್ಡ್ ನಲ್ಲಿ 40 ರೂ. ಇದ್ದರೂ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಇದು ಅಸಮರ್ಪಕ ಎನ್ನಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಮೆಟ್ರೋ ಮೇಲ್ವಿಚಾರಣೆ ಮತ್ತು ಕಾರ್ಯಾಚರಣೆ ವಿಭಾಗದ ಕಾರ್ಯಾಕಾರಿ ನಿರ್ದೇಶಕ ಎಎಸ್ ಶಂಕರ್, ಸ್ಮಾರ್ಟ್ ಕಾರ್ಡ್ ಗಳಲ್ಲಿ ಕನಿಷ್ಠ 50 ರೂ. ಇರಬೇಕಾದದ್ದು ಕಡ್ಡಾಯ ಎಂದು ಎರಡು ತಿಂಗಳ ಹಿಂದೆಯೇ ತಿಳಿಸಲಾಗಿತ್ತು. ಇದರಿಂದಾಗಿ ಬುಧವಾರದಿಂದ ಹೊಸ ನಿಯಮ ಜಾರಿಗೊಳಿಸಿರುವುದಾಗಿ ಹೇಳಿದ್ದಾರೆ.