ಮೈಸೂರು, ಜು. 2 : ಅಕ್ರಮ ಸಂಬಂಧ ಬಹಿರಂಗಗೊಂಡ ಹಿನ್ನಲೆ ವಿವಾಹಿತ ಜೋಡಿಯೊಂದು ನೇಣಿಗೆ ಶರಣಾಗಿರುವ ಘಟನೆ ಮೈಸೂರಿನ ರಮಾಬಾಯಿ ನಗರದಲ್ಲಿ ನಡೆದಿದೆ. ನಗರದ ನಿವಾಸಿ ಸಂತೋಷ್ ಕುಮಾರ್(34), ಜೆಪಿ ನಗರದ ನಿವಾಸಿ ಸುಮಿತ್ರ(35) ಮೃತರು. ಸಂತೋಷ್ ಕುಮಾರ್ ಅವರು ಅರ್ಚನಾ ಅವರನ್ನು ವಿವಾಹವಾಗಿದ್ದರೆ, ಸುಮಿತ್ರ ಅವರು ಸಿದ್ದರಾಜು ಅವರನ್ನು ವಿವಾಹವಾಗಿದ್ದು, ಇಬ್ಬರಿಗೂ ಮಕ್ಕಳಿದ್ದಾರೆ. ಜೆಪಿ ನಗರದ ಕಾರ್ಖಾನೆಯಲ್ಲಿ ನೌಕರರಾಗಿದ್ದ ಇವರಿಬ್ಬರ ನಡುವೆ ಅಕ್ರಮ ಸಂಬಂಧವಿದ್ದು, ಈ ವಿಷಯ ಎರಡು ಕುಟುಂಬದವರಿಗೂ ತಿಳಿದು ರಾಜಿ ಪಂಚಾಯಿತಿ ನಡೆಸಿ ಎಚ್ಚರಿಕೆ ನೀಡಿದ್ದರು. ಆದರೂ ಇಬ್ಬರ ನಡುವೆ ಅಕ್ರಮ ಸಂಬಂಧ ಮುಂದುವರಿದಿತ್ತು. ಕಳೆದ ಗುರುವಾರ ಸಂತೋಷ್ ಕುಮಾರ್ ಅವರ ಪತ್ನಿ ಊರಿಗೆ ತೆರಳುತ್ತಿದ್ದಂತೆ ಸುಮಿತ್ರಾ ಮನೆಗೆ ಬಂದಿದ್ದಾರೆ. ಸುಮಿತ್ರಾ ಮನೆಗೆ ಬಂದಿರುವ ವಿಷಯವನ್ನು ನೆರೆ ಹೊರೆಯ ನಿವಾಸಿಗಳಿಂದ ತಿಳಿದ ಅರ್ಚನಾ, ಬೆಳಗ್ಗೆಯೇ ಮನೆ ಹತ್ತಿರ ಬಂದು ಬಾಗಿಲು ತೆರೆಯುವಂತೆ ಗಲಾಟೆ ಮಾಡಿದ್ದಲ್ಲದೆ ಮಹಿಳಾ ಪೊಲೀಸ್ ಠಾಣೆಗೂ ದೂರು ನೀಡಲು ತೆರಳಿದ್ದಾರೆ. ಅಷ್ಟರಲ್ಲಿ ಸುಮಿತ್ರಾ ಅವರ ಪತಿ ಸಿದ್ದರಾಜುಗೂ ವಿಷಯ ತಿಳಿದು ಮನೆಯತ್ತ ಬಂದಿದ್ದಾರೆ. ಗಾಬರಿಗೊಂಡ ಸಂತೋಷ್ ಕುಮಾರ್ ಮತ್ತು ಸುಮಿತ್ರಾ ಕೋಣೆಯಲ್ಲಿ ಒಂದೇ ಹಗ್ಗಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.