ಮುಂಬೈ: ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರವು ರೈತರನ್ನು ವಂಚಿಸಿದೆ, ಅಧಿಕಾರಕ್ಕೆ ಬರುವುದಕ್ಕೂ ಮುನ್ನ ನೀಡಿದ್ದ ಆಶ್ವಾಸನೆಗಳು ಹುಸಿಯಾಗಿವೆ ಎಂದು ಆರೋಪಿಸಿ ರೈತ ಸಂಘಟನೆಗಳು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ.
ನಾಸಿಕ್ ನಿಂದ ಮುಂಬೈ ತನಕ ಸುಮಾರು 180 ಕಿ.ಮೀ. ದೂರದ ತನಕ ತೆರಳಿದ ಈ ಮೆರವಣಿಗೆಯಲ್ಲಿ ಸುಮಾರು 50,000ಕ್ಕೂ ಅಧಿಕ ರೈತರು ಪಾಲ್ಗೊಂಡಿದರು.
ಅಖಿಲ ಭಾರತ ಕಿಸಾನ್ ಸಭಾ(ಎಐಕೆಎಸ್) ಆಯೋಜನೆಯ ಈ ಮೆರವಣಿಗೆಯಲ್ಲಿ ಮಹಿಳೆಯರು ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ರೈತ ಸಮೂಹವನ್ನು ಕಾಣಬಹುದಾಗಿದೆ.
ನಾಸಿಕ್ ನಿಂದ ಮುಂಬೈಗೆ ಪಾದಯಾತ್ರೆ ಶುರುವಾಗಿದೆ. ಕಳೆದ ವರ್ಷ ಘನತೆಯ ಬದುಕಿಗಾಗಿ ಮಹಾರಾಷ್ಟ್ರ ರಾಜ್ಯದ 50 ಸಾವಿರ ರೈತರು ಕೆಂಬಾವುಟದಡಿ ನಾಸಿಕ್ ನಿಂದ ಮುಂಬೈಗೆ ಪಾದಯಾತ್ರೆ ನಡೆಸಿ ರಾಷ್ಟ್ರವ್ಯಾಪಿ ಗಮನ ಸೆಳೆದಿದ್ದರು.
ಮಹಾರಾಷ್ಟ್ರದ 23 ಜಿಲ್ಲೆಗಳಿಂದ ಬಂದಿರುವ ರೈತರ ಈ ಸಮಾವೇಶ, ಪ್ರತಿಭಟನಾ ಮೆರವಣಿಗೆಗೆ ಫೆಬ್ರವರಿ 20ರಂದೇ ಚಾಲನೆ ಸಿಕ್ಕಿತ್ತು. ಕಮ್ಯೂನಿಸ್ಟ್ ನಾಯಕ ಗೋವಿಂದ್ ಪನ್ಸಾರೆ ಅವರ ನಾಲ್ಕನೇ ಪುಣ್ಯತಿಥಿಯ ಸಂದರ್ಭದಲ್ಲಿ ಈ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ.
11 ತಿಂಗಳ ಹಿಂದೆ ಇದೇ ರೀತಿ ಬೃಹತ್ ಜಾಥಾ ನಡೆಸಲಾಗಿತ್ತು. ಆಗ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ರೈತರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಕನಿಷ್ಠ ಬೆಂಬಲ ಬೆಲೆ, ಸಾಲಮನ್ನಾ, ಬರಪೀಡಿತ ಪ್ರದೇಶಗಳಿಗೆ ಪರಿಹಾರ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾರ್ಚ್ 2018ರಲ್ಲಿ ಜಾಥಾ ನಡೆಸಲಾಗಿತ್ತು. ಅದರೆ, ಯಾವುದೇ ಭರವಸೆಯನ್ನು ಈಡೇಸಿರಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಾರಿ ಸಂಖ್ಯೆ ಇನ್ನೂ ಹೆಚ್ಚಾಗಿದೆ. ಸುಳ್ಳು ಭರವಸೆ ಬಹಳ ದಿನ ನಡೆಯುವುದಿಲ್ಲ. ಬೇಡಿಕೆ ಈಡೇರಿಸಿ ಇಲ್ಲವೆ ತೊಲಗಿ ಎಂದು ಪ್ರತಿಭಟನಾ ಪಾದಯಾತ್ರೆಗೆ ಮುಂದಾಗಿದ್ದಾರೆ.