ಅಡುಗೆ ಸಾಮಗ್ರಿಗಳಿಂದ ಮಾರಕಾಸ್ತ್ರ ತಯಾರಿಕೆ

ಅಡುಗೆ ಸಾಮಗ್ರಿಗಳಿಂದ ಮಾರಕಾಸ್ತ್ರ ತಯಾರಿಕೆ

ಬೆಂಗಳೂರು, ಅ. 10: ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಕೈದಿಗಳು ಅಡುಗೆ ಸಾಮಗ್ರಿಗಳಿಂದಲೇ ಮಾರಕಾಸ್ತ್ರಗಳನ್ನು ಸಿದ್ಧಪಡಿಸುತ್ತಿದ್ದರು ಎಂಬ ಸ್ಫೋಟಕ ಮಹಿತಿ ಬೆಳಕಿಗೆ ಬಂದಿದೆ.

ಜೈಲಿನಲ್ಲಿರುವ ಕೆಲ ಕೈದಿಗಳು ಅಡುಗೆಗೆ ಬಳಸುವ ಸೌಟು, ಚಮಚ, ತಟ್ಟೆ, ಲೋಟ ಹಾಗೂ ಗ್ಯಾಸ್ ಹಚ್ಚಲು ಬಳಸುವ ಲೈಟರ್‌ಗಳ ಒಂದು ಭಾಗವನ್ನು ಚನ್ನಾಗಿ ಉಜ್ಜಿ ಮಾರಕಾಸ್ತ್ರಗಳನ್ನಾಗಿ ಸಿದ್ಧಪಡಿಸುತ್ತಿದ್ದರು ಎಂಬುದು ತಿಳಿದು ಬಂದಿದೆ.

ಮೊಬೈಲ್ ಮತ್ತು ಗಾಂಜಾ ಬಳಕೆ ಆರೋಪದ ಮೇಲೆ ನೆನ್ನೆ ಮುಂಜಾನೆ ಕೇಂದ್ರ ಅಪರಾಧ ವಿಭಾಗ(ಸಿಸಿಬಿ)ಅಧಿಕಾರಿಗಳ ತಂಡ ಕೇಂದ್ರ ಪರಪ್ಪನ ಅಗ್ರಹಾರ ಕಾರಾಗೃಹದ ಮೇಲೆ ದಾಳಿ ನಡೆಸಿದಾಗ ಈ ವಿಚಾರ ಬಯಲಾಗಿದ್ದು, ಅಧಿಕಾರಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ದಾಳಿ ವೇಳೆ ಮೊಬೈಲ್, ಸಿಮ್ ಕಾರ್ಡ್ ಹಾಗೂ ಅಡುಗೆ ಸಾಮಗ್ರಿಗಳಿಂದ ತಯಾರಿಸಲಾಗಿದ್ದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸಿಸಿಬಿಯ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದ ಸುಮಾರು 60 ಮಂದಿಗೂ ಅಧಿಕ ಅಧಿಕಾರಿಗಳ ತಂಡ ಮುಂಜಾನೆ 6 ಗಂಟೆಯಿಂದ ಅಪರಾಹ್ನ 12 ಗಂಟೆವರೆಗೆ ಜೈಲಿನ ಎಲ್ಲ ಬ್ಯಾರಕ್‌ಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಿದೆ. ಈ ವೇಳೆ 37 ಚಾಕುಗಳು, ಗಾಂಜಾ, ಗಾಂಜಾ ಪೈಪುಗಳು, ಮೊಬೈಲ್‌ಗಳು, ಹತ್ತಾರು ಸಿಮ್ ಕಾಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಾರಕಾಸ್ತ್ರ ತಯಾರಿಕೆ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಕ್ಕಿರುವ ಬಹುತೇಕ ಮಾರಕಾಸ್ತ್ರಗಳನ್ನು ಕೈದಿಗಳೇ ಸಿದ್ಧಪಡಿಸಿದ್ದಾರೆ. ಜೈಲಿನಲ್ಲಿ 165 ಜನ ಸಜಾಬಂಧಿಗಳಿಗೆ ಅಡುಗೆ ಮಾಡಲು ಹಾಗೂ ಊಟ ಬಡಿಸಲು ಅವಕಾಶ ನೀಡಲಾಗಿದೆ. ಈ ವೇಳೆ ಕೆಲ ಕೈದಿಗಳು ಅಡುಗೆಗೆ ಬಳಸುವ ಸೌಟು, ಚಮಚ, ತಟ್ಟೆ, ಲೋಟ ಹಾಗೂ ಲೈಟರ್‌ಗಳನ್ನು ಕಳವು ಮಾಡುತ್ತಿದ್ದರು.

ಈ ಉಪಕರಣಗಳನ್ನು ತಮ್ಮ ಕೊಠಡಿಗೆ ಕೊಂಡೊಯ್ದು, ರಾತ್ರಿಯಿಡಿ ನುಣುಪಾಗಿ ಉಜ್ಜಿ ಆಯುಧವನ್ನಾಗಿ ರೂಪಿಸುತ್ತಿದ್ದರು. ಮತ್ತೆ ಕೆಲ ಕೈದಿಗಳು ಜೈಲಿನ ಆವರಣದಲ್ಲಿರುವ ಕುಲುವೆ ಹಾಗೂ ಲೆಥಿಂಗ್ ಯಂತ್ರದ ಮೂಲಕ ಸೌಟು, ಚಮಚ ಹಾಗೂ ತಟ್ಟೆಯ ಒಂದು ಭಾಗವನ್ನು ಕತ್ತರಿಸಿ, ಬಳಿಕ ಅವುಗಳನ್ನು ಅದೇ ಯಂತ್ರ ಹಾಗೂ ಕುಲುವೆ ಮೂಲಕ ಚೂಪಾಗಿ ಮಾಡುತ್ತಿದ್ದರು.

ಮತ್ತೂಂದೆಡೆ ಮಚ್ಚಿನ ಹಿಂಭಾಗದ ಮರದ ತುಂಡನ್ನು ಬೇರ್ಪಡಿಸಿ, ಅದನ್ನು ತಮ್ಮ ಬಳಿಯೇ ಇಟ್ಟುಕೊಳ್ಳುತ್ತಿದ್ದರು. ಗ್ಯಾಸ್ ಹಚ್ಚುವ ಲೈಟರ್ ಹಿಂಭಾಗದ ಪ್ಲಾಸ್ಟಿಕ್ ವಸ್ತುವನ್ನು ಕತ್ತರಿಸುತ್ತಿದ್ದ ಕೈದಿಗಳು ಲೈಟರ್‌ನ ಉಳಿದ ಭಾಗಕ್ಕೆ ಮತ್ತೂಂದು ಕಬ್ಬಿಣ ವಸ್ತುವನ್ನು ಅಳವಡಿಸಿ ಸಾಣೆ ಹಿಡಿದಿದ್ದಾರೆ.

ವಿರೋಧಿಗಳ ಮೇಲೆ ದಾಳಿ ಸಿದ್ಧತೆ: ತಮ್ಮ ವಿರೋಧಿ ಬಣದ ಕೈದಿಗಳ ಮೇಲೆ ದಾಳಿ ನಡೆಸಲು ಮಾರಕಾಸ್ತ್ರಗಳನ್ನು ತಯಾರಿಸಿ ಸಿದ್ದತೆ  ಮಾಡಿಕೊಂಡಿರುವ ಸಾಧ್ಯತೆಯಿದೆ. ಈ ಬಗ್ಗೆ ಕಾರಾಗೃಹ ಇಲಾಖೆ ಅಧಿಕಾರಿಗಳಿಗೆ ಪತ್ರದ ಮೂಲಕ ಕಾರಣ ಕೇಳಲಾಗುವುದು ಎಂದು ಸಿಸಿಬಿ ತಿಳಿಸಿದೆ.

ಜೈಲಿನ ಮೂಲಗಳ ಪ್ರಕಾರ ಸಜಾಬಂಧಿಗಳಿಗೆ ಮಾತ್ರ ಅಡುಗೆ ಮಾಡಲು ಅವಕಾಶ ನೀಡಲಾಗಿದೆ. ಈ ಕೈದಿಗಳು ಈ ರೀತಿ ಮಾಡಲು ಸಾಧ್ಯವಿಲ್ಲ. ಅಡುಗೆ ಮತ್ತು ಊಟ ಬಡಿಸುವ ಸಂದರ್ಭದಲ್ಲಿ ಇತರೆ ಕೈದಿಗಳು ಕಳವು ಮಾಡಿ ಈ ರೀತಿಯ ಮಾರಕಾಸ್ತ್ರಗಳನ್ನು ತಯಾರಿಸಿಕೊಂಡಿರುವ ಸಾಧ್ಯತೆಯಿದೆ. ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿವೆ.

ಮೊಬೈಲ್ ಬಳಕೆ:  ಜೈಲಿನ ಹಲವೆಡೆ ಮೊಬೈಲ್ ಜಾಮರ್ ಅಳವಡಿಸಿದ್ಧರೂ ಕೆಲವಡೆ ಮೊಬೈಲ್ ನೆಟ್ವರ್ಕ್ ಸಂಪರ್ಕಿಸಬಹುದು. ಈ ಸ್ಥಳದಲ್ಲಿ ಕೈದಿಗಳು ಹೊರಗಿನ ತಮ್ಮ ಸಹಚರರು, ಸಂಬಂಧಿಗಳ ಜತೆ ಮಾತನಾಡಲು ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಅದಕ್ಕಾಗಿ ತಮ್ಮನ್ನು ಭೇಟಿ ಮಾಡಲು ಬರುವ ವ್ಯಕ್ತಿಗಳಿಂದ ಸಿಮ್‌ಕಾರ್ಡ್ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.

ಸಿಸಿಬಿ ದಿಢೀರ್ ದಾಳಿ: ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸೂಚನೆ ಮೇರೆಗೆ ದಾಳಿ ನಡೆಸಲಾಗಿದೆ. ದಾಳಿಯಲ್ಲಿ 37 ಚಾಕು, ಮಾರಕಾಸ್ತ್ರಗಳು, ಗಾಂಜಾ ಮತ್ತು ಗಾಂಜಾ ಪೈಪುಗಳು ದೊರೆತಿವೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಕೊಲೆ, ದರೋಡೆ, ಸುಲಿಗೆಯಂತಹ ಪ್ರಕರಣಗಳಲ್ಲಿ ಜೈಲು ಸೇರಿರುವ ಕೆಲ ಕೈದಿಗಳು ಇಲ್ಲಿಂದಲೇ ಹೊರಗಡೆ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸಲಾಗಿದೆ ಎಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದರು.

 

 

ಫ್ರೆಶ್ ನ್ಯೂಸ್

Latest Posts

Featured Videos