ಬೆಂಗಳೂರು, ಮಾ, 29, ನ್ಯೂಸ್ ಎಕ್ಸ್ ಪ್ರೆಸ್: ರೇಡ್ ಮಾಡ್ಸೋಕೆ ನಾವು ಐಟಿ ಅಧಿಕಾರಿಗಳಾ, ನಾವು ಹೇಳಿದರೆ ಅಧಿಕಾರಿಗಳು ರೇಡ್ ಮಾಡುತ್ತಾರಾ ನೀವೇ ಹೇಳಿ? ಜಿಲ್ಲಾ ಉಸ್ತುವಾರಿ ಸಚಿವರ ಮನೆ ಮೇಲಿನ ಐಟಿ ರೇಡ್ ಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸುಮಲತಾ ಅಂಬರೀಶ್ ಪುತ್ರ ಅಭಿಷೇಕ್ ಹೇಳಿದ್ದಾರೆ. ಹೆಚ್ಚೂ ಕಡಿಮೆ ಇದೇ ಧಾಟಿಯಲ್ಲಿ ಸುಮಲತಾ ಅವರು ಕೂಡ ನೀಡಿದ್ದಾರೆ. ಗುರುವಾರದಂದು ನಡೆದ ಆದಾಯ ಇಲಾಖೆ ಅಧಿಕಾರಿಗಳ ದಾಳಿ ವಿಚಾರದ ಬಗ್ಗೆ ಅಭಿಷೇಕ್ ಪ್ರತಿಕ್ರಿಯಿಸಿದ್ದು ಹೀಗೆ. ಮದ್ದೂರು ಪಟ್ಟಣದ ಎಳನೀರು ಮಾರುಕಟ್ಟೆಯಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಮಂಡ್ಯದಲ್ಲಿ ಅಂಬರೀಶ್ ಅವರ ಶಕ್ತಿ ಏನು ಎಂಬುದನ್ನು ಮತದಾರರು ಏಪ್ರಿಲ್ ಹದಿನೆಂಟರಂದು ನಡೆಯುವ ಚುನಾವಣೆಯಲ್ಲಿ ತೋರಿಸುವ ಮೂಲಕ ಮೇ ಇಪ್ಪತ್ಮೂರರಂದು ಹೊರಬೀಳಲಿರುವ ಫಲಿತಾಂಶದಲ್ಲಿ ನಮ್ಮ ತಾಯಿಯನ್ನು ಅಧಿಕ ಮತಗಳ ಅಂತರದಿಂದ ಗೆಲ್ಲುವಂತೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಹೋದ ಕಡೆಯೆಲ್ಲ ಜನರಿಂದ ಉತ್ತಮ ಪ್ರತಿಕ್ರಿಯೆ ಕಂಡುಬರುತ್ತಿದೆ. ಜನರೇ ನಮ್ಮ ಬಳಿ ಬಂದು ಸ್ವಯಂಪ್ರೇರಿತರಾಗಿ ಬೆಂಬಲ ನೀಡುತ್ತಿದ್ದಾರೆ. ದಿನದಿಂದ ದಿನಕ್ಕೆ ನಮಗೆ ಅದ್ಭುತ ಪ್ರತಿಕ್ರಿಯೆ ಸಿಗುತ್ತಿದೆ. ಮಂಡ್ಯ ಜಿಲ್ಲೆಯ ಜನರು ನಮಗೆ ತೋರಿಸುತ್ತಿರುವ ಪ್ರೀತಿ-ವಿಶ್ವಾಸವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ನಿಮ್ಮ ಸೇವೆ ಮಾಡಲು ನನ್ನ ತಾಯಿಗೆ ಒಂದು ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.