ಬೇಲೂರು: ಹಕ್ಕಿಪಿಕ್ಕಿ ಜನಾಂಗದವರ ಅಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆಗಳ ರೂಪಿಸಿದ್ದು ಸಮಾಜಕಲ್ಯಾಣ ಇಲಾಖೆಯಿಂದ ತಾರೀಮರ ಗ್ರಾಮದ ಬಳಿ ೧೦ ಎಕರೆ ಭೂಮಿಯನ್ನು ಖರೀದಿಸಿದ್ದು ನಿವೇಶನವನ್ನಾಗಿ ಮಾರ್ಪಡಿಸಿ ವಿತರಿಸಲಾಗುವುದು ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.
ಅಲೆಮಾರಿ, ಅರೆಅಲೆಮಾರಿ ಜನಾಂಗದ ೩೪ ಜನರಿಗೆ ವ್ಯಾಪಾರ ವಹಿವಾಟು ನಡೆಸಲು ತಲಾ ೫೦ ಸಾವಿರ ರೂ.ಗಳ ಚಕ್ ವಿತರಿಸಿ ಮಾತನಾಡಿದ ಅವರು, ಜಮೀನಿನನ್ನು ಅನ್ಯ ಸಂಕ್ರಮಣ ಮಾಡಲು ಪ್ರಸ್ತಾವನೆ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆ. ನಿವೇಶನವಾಗಿ ಮಾರ್ಪಾಡಾದ ಕೂಡಲೆ ರಾಜೀವ್ಗಾಂಧಿ ಅಭಿವೃದ್ಧಿ ನಿಗಮದಿಂದ ಮನೆಗಳ ನಿರ್ಮಿಸಿಕೊಡಲಾಗುವುದು.
ಈವರಗೆ ಕುರಿ ಸಾಕಣೆ, ಪಶು ಸಾಕಣೆ, ಕೃಷಿ ಚಟುವಟಿಕೆಗೆ ಸಹಾಯ ನೀಡಲಾಗುತ್ತಿತ್ತು ಇದೀಗ ವ್ಯಾಪಾರದ ಉದ್ದೇಶವಿಟ್ಟುಕೊಂಡು ನೆರವು ನೀಡಲಾಗಿದೆ. ಕಾಡುಮೇಡುಗಳ ನಡುವೆ ಅಲೆಮಾರಿಗಳಾಗಿ ಬದುಕು ಸಾಗಿಸುತ್ತಿದ್ದವರು ವರ್ಷ ಕಳೆದಂತೆ ಜೀವಶೈಲಿಯನ್ನೂ ಬದಲಾಯಿಸಿಕೊಂಡಿದ್ದಾರೆ. ಉತ್ತಮ ಬದುಕಿಗೊಂದು ಆಶ್ರಯ ಕೇಳುತ್ತಿದ್ದು ಅದನ್ನು ಪೂರ್ಣಗೊಳಿಸುವ ಜವಾಬ್ದಾರಿ ನಮ್ಮದಾಗಿದೆ. ತಾ.ಪಂ.ಅಧ್ಯಕ್ಷೆ ಇಂದಿರಾರವಿಕುಮಾರ್, ಸದಸ್ಯೆ ತೀರ್ಥಮ್ಮ, ಜಿ.ಪಂ.ಸದಸ್ಯೆ ಲತಾಮಂಜೇಶ್ವರಿ, ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಮೋಹನಕುಮಾರ್, ಮಾಜಿ ಗ್ರಾ.ಪಂ.ಸದಸ್ಯೆ ಇಂದ್ರಾಣಿ ಇದ್ದರು.