ಕೊಟ್ಟೂರು: ತಾಲೂಕಿನಲ್ಲಿ ಸ್ಮಶಾನ ರಕ್ಷಣೆ ಹಾಗೂ ಸ್ಮಶಾನ ಕಾರ್ಮಿಕ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿ ಗ್ರಾ.ಪಂ. ಬುಧವಾರದಿಂದ ಮನವಿ ಸಲ್ಲಿಸುವ ಅಭಿಯಾನವನ್ನು ಹಮ್ಮಿಕೊಂಡಿರುವುದಾಗಿ ತಾಲೂಕು ಸ್ಮಶಾಣ ಕಾರ್ಮಿಕರ ಸಂಘದ ಅಧ್ಯಕ್ಷ ಮೂಗಪ್ಪ ಹೇಳಿದರು.
ಸ್ಮಶಾಣ ಕಾರ್ಮಿಕ ಸಂಘದ ಅಧ್ಯಕ್ಷ ಮೂಗಪ್ಪ, ಹಾಗೂ ಪದಾಧಿಕಾರಿಗಳು ಬುಧವಾರ ಶಿರಬಿ ಗ್ರಾ.ಪಂ. ತೆರಳಿ ಶಿರಬಿಯಲ್ಲಿ ೩ ಎಕರೆ, ಗಂಗಮ್ಮನಹಳ್ಳಿಯಲ್ಲಿ ೪ ಎಕರೆ ಸ್ಮಶಾಣ ಒತ್ತುವರಿಯಾಗಿದ್ದು, ಇದನ್ನು ತಕ್ಷಣ ಬಿಡಿಸಿ ತಂತಿಬೇಲಿ ಹಾಕಿಸಬೇಕೆಂದು ಗ್ರಾ.ಪಂ. ಪಿಡಿಒ ಶ್ರೀನಿವಾಸ ರೆಡ್ಡಿಗೆ ಮನವಿ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ತಾಲೂಕಿನಲ್ಲಿ ಪ್ರತಿ ಗ್ರಾ.ಪಂ. ವ್ಯಾಪ್ತಿಯ ಹಳ್ಳಿಗಳಲ್ಲಿ ಸ್ಮಶಾಣಗಳು ಒತ್ತುವರಿಯಾಗಿವೆ. ಅವುಗಳನ್ನು ಗ್ರಾ.ಪಂ. ಬಿಡಿಸಿ ತಂತಿಬೇಲಿ ಹಾಕಿಸಬೇಕು. ಗ್ರಾ.ಪಂ.ಯಲ್ಲಿ ಒಬ್ಬ ಸ್ಮಶಾಣ ಕಾರ್ಮಿಕನನ್ನು ನೌಕರರನ್ನಾಗಿ ನೇಮಿಸಬೇಕು ಎಂಬ ಬೇಡಿಕೆ ಸೇರಿದಂತೆ ಇತರೆ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.
ಸ್ಮಶಾಣ ಕಾರ್ಮಿಕ ಸಂಘದ ಅಧ್ಯಕ್ಷ ಮೂಗಪ್ಪ ಹಾಗೂ ಪದಾಧಿಕಾರಿಗಳು ರಾಂಪುರ ಗ್ರಾ.ಪಂ.ಗೆ ತೆರಳಿ ಕಾರ್ಯದರ್ಶಿ ಶಿವರುದ್ರಮ್ಮಗೆ ಮನವಿ ಸಲ್ಲಿಸಿದರು.
ಗುರುವಾರ ತೂಲಹಳ್ಳಿ, ನಾಗರಕಟ್ಟೆ ಗ್ರಾ.ಪಂ. ತೆರಳಿ ಪಿಡಿಒಗೆ ಮನವಿ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದ ಅಧ್ಯಕ್ಷರು, ಸ್ಮಶಾಣದಲ್ಲಿ ಸಮಾಧಿ ನಿರ್ಮಿಸುವ ಕಾರ್ಮಿಕನಿಗೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ೨೫೦೦ ರು. ನೀಡಬೇಕು. ಅಲ್ಲಿ ಬೋರ್ವೆಲ್ ಕೊರಸಿಕೊಡಬೇಕು. ಉದ್ಯಾನವನವನ್ನಾಗಿ ಪರಿವರ್ತಿಸಲು ಗ್ರಾ.ಪಂ. ಆರ್ಥಿಕ ನೆರವು ನೀಡಬೇಕು ಹೀಗೆ ಹಲವಾರು ಬೇಡಿಕೆಗಳಿವೆ ಎಂದರು.