ಬೆಂಗಳೂರು, ಮಾ. 27: ಸಿಲಿಕಾನ್ ಸಿಟಿಯಲ್ಲಿ ಉಸಿರಾಡಲು ಕಷ್ಟವಾಗಿದ್ದಂತಹ ರಸೆಲ್ ಮಾರ್ಕೆಟ್ಟನ್ನು ಇಂದು ಸಂಪೂರ್ಣ ಸ್ವಚ್ಛಗೊಳಿಸಲಾಗಿದೆ.
ಹೌದು, ಲಾಕ್ ಡೌನ್ ಹಿನ್ನೆಲೆಯಲ್ಲಿ ಇಂದು ನಗರದ ರಸೆಲ್ ಮಾರ್ಕೆಟ್ ಸಂಪೂರ್ಣ ಬಂದ್ ಆಗಿದ್ದು, ಇಂದು ಮಾರ್ಕೆಟ್ ಅನ್ನ ಸಂಪೂರ್ಣ ಸ್ವಚ್ಛ ಮಾಡಲಾಗುತ್ತಿದೆ.
35 ಮಾರ್ಷಲ್ಸ್, ಐವತ್ತಕ್ಕೂ ಹೆಚ್ಚು ಪೌರಕಾರ್ಮಿಕರು ಸೇರಿ ಮಾರುಕಟ್ಟೆಯ ಮಾಂಸದ ಅಂಗಡಿಗಳ ಹೊರಗಡೆ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದಾರೆ. ಹಲವು ವರ್ಷಗಳಿಂದ ಮಲಿನಗೊಂಡಿದ್ದ ಮಾರುಕಟ್ಟೆಯಲ್ಲಿ ಉಸಿರಾಟಕ್ಕೂ ಕಷ್ಟವಾಗುವಂತಹ ವಾತಾವರಣ ನಿರ್ಮಾಣವಾಗಿತ್ತು. ಸದ್ಯ ಇಂದು ಬೆಳಗ್ಗೆಯಿಂದ ಸ್ವಚ್ಛತಾ ಕಾರ್ಯ ನಡೆಯುತ್ತಿದೆ. ಸ್ವಚ್ಛತಾ ಕಾರ್ಯಕ್ಕೆ ಶಾಸಕ ರಿಜ್ವಾನ್ ಅರ್ಷದ್ ಹಾಗೂ ಪಾಲಿಕೆ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಚಾಲನೆ ನೀಡಿದರು.
ಇನ್ನೊಂದೆಡೆ ಆನೇಕಲ್ನಲ್ಲಿ ಪುರಸಭೆ ವತಿಯಿಂದ ಔಷಧಿ ಸಿಂಪಡಣೆ ಕಾರ್ಯ ನಡೆಯಿತು. ಸರ್ಕಾರಿ ಆಸ್ಪತ್ರೆ, ರಸ್ತೆ ಬದಿ, ದಿನಬಳಕೆಯ ವಸ್ತುಗಳ ಅಂಗಡಿಗಳ ಬಳಿ ಹಾಗೂ ಹೆಚ್ಚು ಜನಸಂದಣಿ ಇರುವ ಕಡೆಗಳಲ್ಲಿ ಔಷಧಿ ಸಿಂಪಡಣೆ ಮಾಡಲಾಯ್ತು.