ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತಿರುವ ಕೃಪಾನಿಧಿ ವಿದ್ಯಾಸಂಸ್ಥೆಗಳ ಛೇರ್ಮನ್ ಡಾ|| ಪ್ರೊ ಸುರೇಶ್ ನಾಗಪಾಲ್
ಬೆಂಗಳೂರು, ಏ. 17, ನ್ಯೂಸ್ ಎಕ್ಸ್ ಪ್ರೆಸ್: ಮಾರ್ಡನ್ ಗುರುಕುಲ ಪದ್ದತಿಯಿಂದ ಉತ್ತಮ ಫಲಿತಾಂಶ ಸಾಧ್ಯವಾಗುತ್ತಿದೆ ಎಂದು ಕೃಪಾನಿಧಿ ವಿದ್ಯಾಸಂಸ್ಥೆಗಳ ಛೇರ್ಮನ್ ಡಾ|| ಪ್ರೊ ಸುರೇಶ್ ನಾಗಪಾಲ್ರವರು ನುಡಿದರು. ಇಂದು ಕೋರಮಂಗಲದ ಕೃಪಾನಿಧಿ ಕಾಲೇಜಿನ ಪ್ರಾಂಗಣದಲ್ಲಿ ನಡೆದ 2019ರ ದ್ವಿತೀಯ ಪಿ.ಯು.ಸಿಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಿಗೆ ಹೂಗುಚ್ಚ ನೀಡಿ ಅಭಿನಂದಿಸಿದರು. ರಾಜ್ಯದಲ್ಲಿ ಈ ವರ್ಷ ದ್ವಿತೀಯ ಪಿ.ಯು.ಸಿ.ಯಲ್ಲಿ 95%ಗಿಂತಲೂ ಉತ್ತಮ ಅಂಕಪಡೆದ ಬಡ ವಿದ್ಯಾರ್ಥಿಗಳಿಗೆ ಜಾತಿ, ಮತ, ಪಂಥಗಳ ಬೇಧವಿಲ್ಲದೆ ವಿದ್ಯಾರ್ಥಿವೇತನ ನೀಡುವ ಮೂಲಕ ಉಚಿತ (ಸರ್ಕಾರಿ ಶುಲ್ಕ ಹೊರತುಪಡಿಸಿ) ವಿದ್ಯಾಭ್ಯಾಸವನ್ನು ನೀಡಲಾಗುತ್ತದೆಂದು ಘೋಷಿಸಿದರು.
ನಾಗಪಾಲ್ರವರು ಮಾತನಾಡುತ್ತಾ ದೇಶದಲ್ಲಿಯೇ ಉತ್ತಮ ಫಲಿತಾಂಶಕ್ಕೆ ಅನ್ವರ್ಥನಾಮವೆಂಬಂತೆ ಕೃಪಾನಿಧಿ ವಿದ್ಯಾಸಂಸ್ಥೆ ಬೆಳೆದು ನಿಂತಿದೆ. ಗುರುಕುಲ ಪದ್ಧತಿಯಲ್ಲಿಯೇ ಶಿಕ್ಷಕರು ಭೋಧಿಸುತ್ತಿರುವುದೇ ಮೂಲ ಕಾರಣವಾಗಿದೆ. ಟ್ಯೂಷನ್ ಹಾವಳಿಯಿಂದ ಶಿಕ್ಷಣ ವಾಣಿಜ್ಯೀಕರಣವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಶಿಕ್ಷಣದ ಹೆಸರಿನಲ್ಲಿ ಮಕ್ಕಳ ಮೇಲೆ ಒತ್ತಡವೇರುವುದು ಸರಿಯಲ್ಲ. ಆಟ ಪಾಠಗಳೊಂದಿಗೆ ಸಂತಸದಿಂದ ವಿದ್ಯೆ ಕಲಿತರೆ, ವಿದ್ಯಾರ್ಥಿಗಳ ಮುಖಭಾವದಲ್ಲಿಯೇ ಶಿಕ್ಷಣದ ಗುಣಮಟ್ಟ ಗೋಚರವಾಗುತ್ತದೆ. ಮಕ್ಕಳು ಪಾಠಗಳನ್ನು ಅರ್ಥ ಮಾಡಿಕೊಂಡು ಪರೀಕ್ಷೆಗೆ ಸಿದ್ದತೆ ನಡೆಸಬೇಕೆ ವಿನಃ ಪಠ್ಯಪುಸ್ತಕದಲ್ಲಿನ ಪ್ರತಿ ವಾಕ್ಯವನ್ನು ಭಟ್ಟಿ ಇಳಿಸುವುದು ಸೂಕ್ತವಲ್ಲ. ಶಿಕ್ಷಕರೇ ಆಗಲೀ, ಪೋಷಕರೇ ಆಗಲಿ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಈ ಕಾರ್ಯಕ್ರಮದಲ್ಲಿ ಕೃಪಾನಿಧಿ ಕಾಲೇಜಿನ ಪ್ರಾಂಶುಪಾಲರಾದ ವೀಣಾ ಜಿ, ಷಹಜಾನ್, ಶಿಕ್ಷಕರಾದ ರಾಮಕೃಷ್ಣ, ಶ್ವೇತಾ ಸಿಂದ್ವಾಣಿ, ಅಸ್ಪಿಯಾ ಮುಂತಾದವರು ಭಾಗವಹಿಸಿದ್ದರು.