ನವದೆಹಲಿ, ಏ. 23, ನ್ಯೂಸ್ ಎಕ್ಸ್ ಪ್ರೆಸ್: 2002ರ ಗುಜರಾತ್ ಗಲಭೆಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಬಿಲ್ಕಿಸ್ ಬನೊ ಅವರಿಗೆ 50 ಲಕ್ಷ ಪರಿಹಾರ ನೀಡುವಂತೆ ಸುಪ್ರೀಂಕೋರ್ಟ್ ಮಂಗಳವಾರ ಗುಜರಾತ್ ಸರ್ಕಾರಕ್ಕೆ ಆದೇಶಿಸಿದೆ. ಅಲ್ಲದೇ, ಆಕೆಗೆ ಸರ್ಕಾರಿ ಉದ್ಯೋಗ ಹಾಗೂ ವಸತಿ ವ್ಯವಸ್ಥೆಯನ್ನು ಕಲ್ಪಿಸುವಂತೆ ನಿರ್ದೇಶನ ನೀಡಿದೆ. 17 ವರ್ಷಗಳ ನಿರಂತರ ಹೋರಾಟದ ಬಳಿಕ ಬಿಲ್ಕಿಸ್ ಬಾನು ಅವರಿಗೆ ನ್ಯಾಯಾಲಯ ಈ ಪರಿಹಾರ ಕಲ್ಪಿಸಿದೆ. ಅಹಮದಾಬಾದ್ ಸಮೀಪವಿರುವ ರಂದೀಕ್ಪುರ್ ಹಳ್ಳಿಯಲ್ಲಿ ಬನೊ 21 ವರ್ಷದವರಿದ್ದಾಗ 2002ರ ಮಾರ್ಚ್ 3ರಂದು ಗುಂಪೊಂದು ಅವರ ಕುಟುಂಬದ ಮೇಲೆ ದಾಳಿ ನಡೆಸಿ, ಕುಟುಂಬದ 14 ಮಂದಿಯನ್ನು ಹತ್ಯೆ ಮಾಡಿತ್ತು. ಬಿಲ್ಕಿಸ್ ಬನೊ ಅವರ ಮೂರು ವರ್ಷದ ಮಗಳಾದ ಶಾಲಿಹಾನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ವೇಳೆ ಗರ್ಭಿಣಿಯಾಗಿದ್ದ ಬಿಲ್ಕಿಸ್ ಅವರ ಮೇಲೆ ಸಾಮೂಹಿಕ ಅತ್ಯಾಚಾರವನ್ನೂ ಎಸಗಲಾಯಿತು. ಪ್ರಜ್ಞೆ ತಪ್ಪಿದ್ದ ಬಿಲ್ಕಿಸ್ ಬನೊ ಸತ್ತಿದ್ದಾಳೆ ಎಂದು ಭಾವಿಸಿ ದಾಳಿಕೋರರು ಜಾಗ ಖಾಲಿ ಮಾಡಿದ್ದರು. ಘಟನೆ ನಂತರ ಗುಜರಾತ್ ಸರ್ಕಾರ ಬಿಲ್ಕಿಸ್ ಬನೊ ಅವರಿಗೆ 5 ಲಕ್ಷ ಪರಿಹಾರ ನೀಡಿತ್ತು. ಆದರೆ, ಇದನ್ನು ನಿರಾಕರಿಸಿದ ಅವರು, ಹೆಚ್ಚಿನ ಪರಿಹಾರಕ್ಕೆ ಮನವಿ ಮಾಡಿ ಹಾಗೂ ತನಿಖೆ ಬಗ್ಗೆ ನಿರ್ಲಕ್ಷ್ಯ ವಹಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. 2008ರಲ್ಲಿ 11 ಮಂದಿ ಆರೋಪಿಗಳಿಗೆ ಬಾಂಬೆ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. ಆದರೆ, ಆರೋಪಿಗಳ ಪರವಾಗಿ ಕೆಲಸ ಮಾಡಿ, ಸಾಕ್ಷ್ಯಗಳನ್ನು ನಾಶ ಮಾಡಲು ಯತ್ನಿಸಿದ ಪೊಲೀಸರ ವಿರುದ್ಧ ಯಾವುದೇ ಕ್ರಮವನ್ನು ತೆಗೆದುಕೊಂಡಿರಲಿಲ್ಲ. ಬಿಲ್ಕಿಸ್ ಬನೊ ಅವರ ಪರ ವಾದ ಮಂಡಿಸಿ ಶೋಭಾ ಗುಪ್ತಾ, ಈಗಾಗಲೇ ನಾಲ್ವರು ಅಧಿಕಾರಿಗಳು ನಿವೃತ್ತಿಯಾಗಿದ್ದಾರೆ ಐದನೇ ಐಪಿಎಸ್ ಅಧಿಕಾರಿ ಆರ್ ಎಸ್ ಭಾಗೊರಾ ಕೂಡ ಅದೇ ನಿವೃತ್ತಿ ಹಂಚಿನಲ್ಲಿ ಇದ್ದಾರೆ. ಆದರೂ ಅವರ ಮೇಲೆ ಸರ್ಕಾರ ಯಾವುದೇ ಶಿಸ್ತುಕ್ರಮ ತೆಗೆದುಕೊಂಡಿಲ್ಲ ಎಂದು ವಾದಿಸಿದ್ದರು. ಮುಖ್ಯ ನ್ಯಾಯಮೂರ್ತಿ ರಂಜನ್ ಗೋಗೊಯ್ ನೇತೃತ್ವದ ತ್ರಿಸದಸ್ಯ ಪೀಠದ ಮುಂದೆ ಗುಜರಾತ್ ಸರ್ಕಾರ ಈ ಪ್ರಕರಣದಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ಪೆನ್ಷನ್ ತಡೆ ಹಾಗೂ ಐದು ದರ್ಜೆ ಹಿಂಬಡ್ತಿ ನೀಡುವುದಾಗಿ ತಿಳಿಸಿತು. ವಾದ ಆಲಿಸಿದ ಸುಪ್ರೀಂಕೋರ್ಟ್, ಸರ್ಕಾರ ಈ ಬಗ್ಗೆ ಇಂದೇ ಕ್ರಮ ತೆಗೆದುಕೊಂಡು, ಅದನ್ನು ನ್ಯಾಯಾಲಯಕ್ಕೆ ತಿಳಿಸಬೇಕು. ನಾಲ್ವರು ಅಧಿಕಾರಿಗಳ ಪೆನ್ಷನ್ ತಡೆಹಿಡಿಯಬೇಕು ಮತ್ತು ಸೇವೆಯಲ್ಲಿರುವ ಉಪ ಆಯುಕ್ತ ಆರ್.ಎಸ್.ಭಾಗೊರಾ ಅವರಿಗೆ ಹಿಂಬಡ್ತಿ ನೀಡಬೇಕು ಎಂದು ಕೋರ್ಟ್ ನಿರ್ದೇಶಿಸಿತು.