ಬೀದರ್, ಡಿ. 17: ವಿಶ್ವವೇ ಗಮನ ಸೆಳೆಯುವಂತೆ ನೂತನ ಅನುಭವ ಮಂಟಪವನ್ನು ನಿರ್ಮಿಸಲು ಹಿರಿಯ ವಿದ್ವಾಂಸ ಗೊ.ರು. ಚನ್ನಬಸಪ್ಪ ನೇತೃತ್ವದ ತಜ್ಞರ ಸಮಿತಿ 600 ಕೋಟಿ ರೂ. ವೆಚ್ಚದ ಯೋಜನ ವರದಿ ಸಲ್ಲಿಸಿತ್ತು. ಸರಕಾರ ಬಸವಕಲ್ಯಾಣ ಅಭಿವೃದ್ಧಿ ಮಂಡಳಿ (ಬಿಕೆಡಿಬಿ) ಮೂಲಕ ಅಂತಾರಾಷ್ಟ್ರೀಯ ಮಟ್ಟದ ಸುಸಜ್ಜಿತ ಅನುಭವ ಮಂಟಪ ನಿರ್ಮಾಣಕ್ಕೆ ಸೆ.2ರಂದು 50 ಕೋಟಿ ರೂ. ಮಂಜೂರು ಮಾಡಿ, ಸದ್ಯಕ್ಕೆ ಕಾಮಗಾರಿ ಆರಂಭಿಸಲು 20 ಕೋಟಿ ರೂ. ಬಿಡುಗಡೆಗೆ ಆದೇಶಿಸಿತ್ತು.
ಆದರೆ ಕಂದಾಯ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಆರ್. ರವಿಕುಮಾರ ಅವರು ಅ.25ರಂದು ಹೊಸ ಆದೇಶ (ಸಂಖ್ಯೆ ಕಂ.ಇ. 78 ಆರ್ಇಎಚ್ 2016) ಹೊರಡಿಸಿದ್ದು, ಪ್ರಸ್ತಾವಿತ ಯೋಜನೆಯನ್ನು 50 ಕೋಟಿ ರೂ.ಗಳಿಗೆ ಮೀರದಂತೆ ಕ್ರಮ ವಹಿಸಬೇಕೆಂದು ಷರತ್ತು ಹಾಕಿದ್ದಾರೆ.