ನವದೆಹಲಿ, ಡಿ. 26: ನಗರದಲ್ಲಿ ಇಂದು ನಸುಕಿನಲ್ಲಿ ಮತ್ತೊಂದು ಅಗ್ನಿ ಆಕಸ್ಮಿಕ ಸಂಭವಿಸಿದ್ದು, 40 ಮಂದಿ ಪಾಣಾಪಾಯದಿಂದ ಸುರಕ್ಷಿತವಾಗಿ ಪಾರಾಗಿದ್ದಾರೆ. ಕೃಷ್ಣ ನಗರ್ ಪ್ರದೇಶದ ನಾಲ್ಕು ಮಹಡಿಗಳ ನೆಲ ಅಂತಸ್ತಿನಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯ ವಸ್ತುಗಳ ಉಗ್ರಾಣದಲ್ಲಿ ಇಂದು 2ರ ನಸುಕಿನಲ್ಲಿ ಬೆಂಕಿ ಕಾಣಿಸಿಕೊಂಡು ಕಟ್ಟಡವನ್ನು ವ್ಯಾಪಿಸಲು ಆರಂಭಿಸಿತು.
ಸುದ್ದಿ ತಿಳಿದ ಕೂಡಲೇ ಅಗ್ನಿ ಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಅಷ್ಟು ಹೊತ್ತಿಗಾಗಲೇ ಬೆಂಕಿಯ ಕೆನ್ನಾಲಿಗೆ ಕಟ್ಟಡವನ್ನು ಮತ್ತಷ್ಟು ವ್ಯಾಪಿಸಿತು.
ತಕ್ಷಣ ಕಾರ್ಯಪ್ರವೃತ್ತರಾದ ದೆಹಲಿ ಅಗ್ನಿಶಾಮಕ ಸೇವೆಗಳ ಅಧಿಕಾರಿಗಳು ಕಟ್ಟಡದ ಮೇಲ್ಬಾಗದಲ್ಲಿದ್ದ ಎಲ್ಲ 40 ಜನರನ್ನು ರಕ್ಷಿಸಿದರು ನಂತರ 4ರ ನಸುಕಿನಲ್ಲಿ ಅಗ್ನಿ ಜ್ವಾಲೆಗಳನ್ನು ನಂದಿಸಲಾಯಿತು ಎಂದು ಉನ್ನತಾಧಿಕಾರಿ ಅತುಲ್ ಗರ್ಗ್ ತಿಳಿಸಿದ್ದಾರೆ.