ಧಾರವಾಡ, ಮಾ. 22, ನ್ಯೂಸ್ ಎಕ್ಸ್ ಪ್ರೆಸ್ : ಮಾ.18ರಂದು ಸಂಭವಿಸಿದ ಅವಘಡದಲ್ಲಿ ಈ ವರೆಗೆ 14 ಜನರು ಮೃತಪಟ್ಟಿದ್ದು, 62ಜನರನ್ನು ರಕ್ಷಣೆ ಮಾಡಲಾಗಿದೆ. ಇಂದು ಯುವಕನೊಬ್ಬನನ್ನು ಎನ್ಡಿಆರ್ಆಫ್ ಪಡೆ ಜೀವಂತವಾಗಿ ಹೊರತೆಗೆದಿತ್ತು. ಇದೀಗ ಪವಾಡವೆಂಬಂತೆ ಇನ್ನಿಬ್ಬರು ಬದುಕಿ ಬಂದಿದ್ದಾರೆ.
ನಿರ್ಮಾಣ ಹಂತದ ಕಟ್ಟಡ ಕುಸಿತ ದುರಂತದಲ್ಲಿ ಸಾವಿನ ಬಾಗಿಲು ತಟ್ಟಿ ಬದುಕಿ ಬಂದ ದಂಪತಿಗಳು. ಎನ್ ಡಿಆರ್ ಎಫ್ ಸಿಬ್ಬಂದಿ ರಕ್ಷಿಸಿದ್ದಾರೆ.
ಇಂದು ದಿಲೀಪ್ ಮತ್ತು ಸಂಗೀತ ದಂಪತಿ ಸಿಲುಕಿರುವ ಜಾಗ ಪತ್ತೆಯಾಗಿತ್ತು. ಆದರೆ ಅವರು ಇರುವ ಜಾಗದಲ್ಲಿ ಅಲುಗಾಡಲೂ ಸ್ಥಳವಿರಲಿಲ್ಲ. ಮತ್ತು ಗೋಡೆ ಅಡ್ಡ ಇತ್ತು.ಹಾಗಾಗಿ ಅವರಿಗೆ ಆಮ್ಲಜನಕ ಪೂರೈಕೆ ಮಾಡಿ ಗೋಡೆ ಒಡೆಯುವ ಕಾರ್ಯಾಚರಣೆಯನ್ನು ಆರಂಭಿಸಲಾಗಿತ್ತು. ಅಗ್ನಿ ಶಾಮಕ ಹಾಗೂ ಎನ್ ಡಿಆರ್ ಎಫ್ ಸಿಬ್ಬಂದಿ ಸತತ 5 ಗಂಟೆ ಕಾರ್ಯಾಚರಣೆ ನಡೆಸಿ ದಂಪತಿಯನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ.
ಸಿಬ್ಬಂದಿ ದುರಂತ ನಡೆದ ದಿನದಿಂದಲೂ ಕಾರ್ಯಾಚರಣೆ ನಡೆಸುತ್ತಿದ್ದು, ಇಂದೂ ಕೂಡ ಮುಂದುವರಿಸಿದ್ದಾರೆ. ಸದ್ಯ ದಿಲೀಪ್ ಹಾಗೂ ಸಂಗೀತ ಧಾರವಾಡದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.