ಮೈಸೂರು, ಸೆ. 6: ನಾಡಹಬ್ಬ ದಸರಾದಲ್ಲಿ ಭಾಗವಹಿಸುವ ಗಜಪಡೆಗೆ ಇಂದು ಚಿನ್ನದ ಅಂಬಾರಿ ಹೊರುವ ಆನೆ ಅರ್ಜುನನಿಗೆ 350ಕೆಜಿ ತೂಕದ ಮರಳು ಮೂಟೆಯನ್ನು ಬೆನ್ನ ಮೇಲೆ ಕಟ್ಟಿ ತಾಲೀಮು ನಡೆಸಲಾಯಿತು. 350ಕೆಜಿ ತೂಕದ ಮರಳು ಮೂಟೆ ಹೊತ್ತ ಅರ್ಜುನ ಅರಮನೆಯಿಂದ ಬನ್ನಿಮಂಟಪದವರೆಗೂ ಸಾಗಿ ಬಂದನು. ಅರ್ಜುನನೊಂದಿಗೆ ಹೆಣ್ಣಾನೆಗಳಾದ (ಕುಂಕಿ) ವಿಜಯ ಮತ್ತು ವರಲಕ್ಷ್ಮಿ ಸಹ ಸಾಗಿಬಂದರು.
ಅರ್ಜುನ 350ಕೆಜಿ ತೂಕದ ಮರಳು ಮೂಟೆ ಹೊತ್ತು ರಾಜಗಾಂಭೀರ್ಯದಲ್ಲಿ ಮುನ್ನಡೆದರೇ ಆತನ ಹಿಂದೆ ಧನಂಜಯ, ಈಶ್ವರ, ಅಭಿಮನ್ಯು ಸಹ ಹೆಜ್ಜೆ ಹಾಕಿದರು. ಅರ್ಜುನ ವಿಜಯದಶಮಿ ದಿನ 750ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊರಲಿದ್ದಾನೆ. ಹೀಗಾಗಿ ಆತನಿಗೆ ಇಂದಿನಿಂದ ಮರಳು ಮೂಟೆ ಹೊರುವ ತಾಲೀಮನ್ನು ಆರಂಭಿಸಲಾಗಿದೆ. ಅಭಿಮನ್ಯು ಆನೆಗೆ ಅಂಬಾರಿ ಹೊರಲು ತಾಲೀಮು ನಡೆಸಲಾಗುವುದು ಎಂದು ತಿಳಿದು ಬಂದಿದೆ.