ಹೈದರಾಬಾದ್,ಜೂ.29 : ಆಂಧ್ರಪ್ರದೇಶದ ಗುಂತಕಲ್ ನಗರದಲ್ಲಿ ಮೃತಪಟ್ಟ ಭಿಕ್ಷಕನೊಬ್ಬನ ಬ್ಯಾಗಿನಲ್ಲಿ 3 ಲಕ್ಷ ಹಣ ಸಿಕ್ಕಿರುವ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಮೃತ ಭಿಕ್ಷುಕ ಬಶೀರ್ ಸಾಹೇಬ್ ( 70) ವರ್ಷದ ಎಂದು ಗುರುತಿಸಲಾಗಿದೆ. ಬಶೀರ್ ಚಿತ್ತೂರು ಜಿಲ್ಲೆಯ ಮದನಪಲ್ಲಿ ಮೂಲದವ ಮಸ್ತಾನ್ ವಾಲಿ ದರ್ಗಾ ಬಳಿ ಅನೇಕ ವರ್ಷಗಳಿಂದ ಭಿಕ್ಷೆ ಬೇಡುತ್ತಿದ್ದರು. ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಬಶೀರ್ ಮೃತಪಟ್ಟಿದ್ದಾನೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ದರ್ಗಾ ಬಳಿ ಬಂದ ಪೊಲೀಸರು, ಮರಣೋತ್ತರ ಪರೀಕ್ಷೆಗಾಗಿ ಬಶೀರ್ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಬಳಿಕ ಪ್ರಕರಣದ ಬಗ್ಗೆ ತನಿಖೆ ನಡೆಸಿದಾಗ ಬಶೀರ್ ಬ್ಯಾಗ್ ಸಿಕ್ಕಿದೆ. ಈ ಬ್ಯಾಗನ್ನು ಪರಿಶೀಲಿಸಿದಾಗ ಅದರೊಳಗಡೆ ಒಂದು ಐಡಿ ಕಾರ್ಡ್ ಸಿಕ್ಕಿದೆ. ಅಲ್ಲದೆ ಸಾಕಷ್ಟು ನಾಣ್ಯ ಹಾಗೂ ನೋಟುಗಳನ್ನು ಕಂಡು ಪೊಲೀಸರು ದಂಗಾಗಿದ್ದಾರೆ.ಹಣವನ್ನು ಎಣಿಕೆ ಮಾಡಿದಾಗ 3,22,670 ಲಕ್ಷ ರೂ. ದೊರೆತಿದೆ. ಹಣವಿದ್ದರೂ ಬಶೀರ್ ಚಿಕಿತ್ಸೆ ಪಡೆದುಕೊಳ್ಳದೇ ಮೃತಪಟ್ಟಿರುವುದಕ್ಕೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.