ಮೈಸೂರು, ಮೇ.13, ನ್ಯೂಸ್ ಎಕ್ಸ್ ಪ್ರೆಸ್: ಪ್ರತ್ಯೇಕ ಪ್ರಕರಣಗಳಲ್ಲಿ ಮೈಸೂರಿನ 2 ಯುವಕರು ನೀರು ಪಾಲಾಗಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಸಮೀಪದ ಬಲಮುರಿ ಬಳಿ ಈಜಲು ಕಾವೇರಿ ನದಿಗೆ ಇಳಿದ 2 ಸುಳಿಗೆ ಸಿಕ್ಕಿ ಮೃತಪಟ್ಟಿದ್ದಾರೆ. ಮೈಸೂರಿನ ಗಾಂಧಿನಗರದ ಬಸವರಾಜು ಪುತ್ರ ಶಿವು (21) ಮತ್ತು ಸಿದ್ದರಾಜು ಅವರ ಪುತ್ರ ಅಜಿತ್ ಮಹದೇವು (21) ಮೃತರು. 6 ಯುವಕರ ತಂಡ ಬಲಮುರಿಗೆ ವಿಹಾರಕ್ಕೆ ಬಂದಿತ್ತು.
ಮುಳುಗುತ್ತಿದ್ದ ಶಿವು ಅವರನ್ನು ಸ್ನೇಹಿತರು ರಕ್ಷಿಸಿ ದಡಕ್ಕೆ ತಂದಿದ್ದಾರೆ. ತೀವ್ರ ಅಸ್ವಸ್ಥಗೊಂಡಿದ್ದ ಅವರನ್ನು ಕೆ.ಆರ್. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಸುನೀಗಿದ್ದಾರೆ. ಅಜಿತ್ ಅವರು ನದಿಯ ಆಳದಲ್ಲಿ ಸಿಲುಕಿದ್ದರಿಂದ ರಕ್ಷಿಸಲು ಸಾಧ್ಯವಾಗಿಲ್ಲ. ಪೊಲೀಸರು ನುರಿತ ಈಜುಗಾರರನ್ನು ಕರೆಸಿ ಶವಕ್ಕಾಗಿ ಶೋಧ ನಡೆಸಿದರು.