ಶಿವಮೊಗ್ಗ, ಏ. 20, ನ್ಯೂಸ್ ಎಕ್ಸ್ ಪ್ರೆಸ್: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಇಂದು ಶಿವಮೊಗ್ಗಕ್ಕೆ ಆಗಮಿಸಿದ್ದ, ಕೇವಲ 1 ನಿಮಿಷದಲ್ಲಿ ಅವರ ಭಾಷಣ ಮುಗಿಸಿದ್ದು ಆಶ್ಚರ್ಯಕ್ಕೆ ಕಾರಣವಾಯಿತು. ಭದ್ರಾವತಿಯಲ್ಲಿ ಯಡಿಯೂರಪ್ಪ ಪುತ್ರ ಬಿ.ವೈ.ರಾಘವೇಂದ್ರ ಪರವಾಗಿ ರೋಡ್ ಶೋ ನಡೆಸಿದ ಶಾ, ಕೇವಲ ಒಂದೇ ನಿಮಿಷದಲ್ಲಿ ಶಾಸ್ತ್ರಕ್ಕೆಂಬಂತೆ ಕೆಲವು ಮಾತು ಆಡಿ ಮಾತು ಮುಗಿಸಿಬಿಟ್ಟರು, ಅಮಿತ್ ಶಾ ನೋಡಲು ಆಗಮಿಸಿದ್ದ ಸಾವಿರಾರು ಕಾರ್ಯಕರ್ತರಿಗೆ ಇದು ನಿರಾಸೆ ಮೂಡಿಸಿತು.
ಭದ್ರಾವತಿಯಲ್ಲಿ ರೋಡ್ ಶೋ ಮಧ್ಯೆಯೇ ಮಾತನಾಡಲು ಮೈಕು ನೀಡಿದಾಗ, ‘ಉರಿ ಬಿಸಿಲಿನಲ್ಲಿ ನೀವು ಬಂದಿರುವುದು ಸಂತಸ ತಂದಿದೆ, ಈ ಬಾರಿ ರಾಘವೇಂದ್ರ ಅವರನ್ನು ಗೆಲ್ಲಿಸಬೇಕಿದೆ, ರಾಘವೇಂದ್ರ ಅವರನ್ನು ಗೆಲ್ಲಿಸುವ ಮೂಲಕ ಮೋದಿ ಅವರನ್ನು ಗೆಲ್ಲಿಸಬೇಕಿದೆ’ ಎಂದರು.
ದೇಶದ ರಕ್ಷಣೆಯ ದೃಷ್ಠಿಯಿಂದ ಮೋದಿ ಅವರನ್ನು ಗೆಲ್ಲಿಸಲೇಬೇಕಿದೆ. ಮೋದಿ ಗೆದ್ದರಷ್ಟೆ ಭಾರತ ಸುರಕ್ಷಿತವಾಗಿರಲಿದೆ, ನಮಗಾಗಿ ಇಷ್ಟು ದೂರ ಬಂದಿರುವ ನಿಮಗೆಲ್ಲಾ ಧನ್ಯವಾದ ಎಂದಷ್ಟೆ ಹೇಳಿ ಅಮಿತ್ ಶಾ ಮಾತು ಮುಗಿಸಿದರು.