ಮುಂಬೈ, ಮಾ. 13, ನ್ಯೂಸ್ ಎಕ್ಸ್ ಪ್ರೆಸ್: ದಿನೆ ದಿನೆ ಲೋಕಸಭಾ ಚುನಾವಣೆಯು ರಂಗೇರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಭರ್ಜರಿ ಸಿದ್ಧತೆಯಲ್ಲಿ ತೊಡಗಿದೆ. ಮಾ.15ರಿಂದ 18ರವರೆಗೆ ಮಹಾರಾಷ್ಟ್ರದಲ್ಲಿ ಮಹತ್ತರದ ಪ್ರಚಾರವನ್ನು ಕೈಗೊಳ್ಳಲಿದೆ.
ಮಹಾರಾಷ್ಟ್ರದಲ್ಲಿ ಒಟ್ಟು 6 ಬೃಹತ್ ರ್ಯಾಲಿಗಳನ್ನು ಆಯೋಜಿಸಿರುವ ಬಿಜೆಪಿ ಈ ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಮಹಾಮೈತ್ರಿ ಪಕ್ಷಗಳ ಪ್ರಾಬಲ್ಯವನ್ನು ದುರ್ಬಲಗೊಳಿಸುವ ಉದ್ದೇಶ ಹೊಂದಿದೆ.
ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಪಕ್ಷದ ಘಟಾನುಘಟಿಗಳು ತಾರಾ ಪ್ರಚಾರಕರಾಗಿ ರ್ಯಾಲಿಗಳಲ್ಲಿ ಭಾಗವಹಿಸುವರು.
ಮಾ.15ರಂದು ಅಮರಾವತಿಯಲ್ಲಿ ಬಿಜೆಪಿ ಮೊದಲ ರ್ಯಾಲಿ ನಡೆಯಲಿದೆ. ನಂತರ ಮಾ. 16ರಂದು ನಾಗ್ಪುರ, ಮಾ.17ರಂದು ಔರಂಗಾಬಾದ್ ಮತ್ತು ನಾಸಿಕ್ ಹಾಗೂ ಮಾ.18ರಂದು ನವೀ ಮುಂಬೈ ಮತ್ತು ಪುಣೆಗಳಲ್ಲಿ ಚುನಾವಣಾ ಪ್ರಚಾರ ಆಂದೋಲನ ಸಭೆಗಳು ನಡೆಯಲಿವೆ. ಮಹಾರಾಷ್ಟ್ರದಲ್ಲಿ ಲೋಕಸಭಾ ಚುನಾವಣೆ ಕದನಕೌತುಕ ಕೆರಳಿಸಿದೆ.