ಮುಂಬೈ, ಅ.10 : ದೇಶದ ಸಮಗ್ರ ಭದ್ರತೆ ಮತ್ತು ಸುರಕ್ಷತೆಗೆ ಪ್ರಧಾನಿ ನರೇಂದ್ರ ಮೋದಿ ಪ್ರಥಮಾದ್ಯತೆ ನೀಡಿದ್ದಾರೆಂದು ಕೇಂದ್ರ ಗೃಹಸಚಿವ ಅಮಿತ್ ಶಾ ಬಣ್ಣಿಸಿದರು.
ವೈರಿಗಳ ನ್ನು ನೋಡಿಕೊಂಡು ಸುಮ್ಮನಿರುವ ಜಾಯಮಾನ ನಮ್ಮದಲ್ಲ, ನಮ್ಮ ಒಬ್ಬ ಯೋಧನನ್ನು ಹತ್ಯೆ ಮಾಡಿದರೆ ನಾವು 10 ವೈರಿಗಳನ್ನು ಕೊಂದು ಹಾಕುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆದ ಶಾ ಘರ್ಜಿಸಿದರು. ಮಹಾರಾಷ್ಟ್ರದಲ್ಲಿ ಅ. 21ರಂದು ನಡೆಯುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಂಬೈ ಸೇರಿದಂತೆ ಕೆಲವೆಡೆ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370ರದ್ದುಗೊಳಿಸಿರುವ ಕ್ರಮವನ್ನು ಸಮರ್ಥಿಸಿಕೊಂಡರು.
ರಾಹುಲ್ ಗಾಂಧಿ ಮತ್ತು ಶರದ್ ಪವಾರ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಈ ಹಿಂದೆ ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್-ಎನ್ಸಿಪಿ ಸಮ್ಮಿಶ್ರ ಸರ್ಕಾರ ಜನರಿಗಾಗಿ ಮಾಡಿದ ಸಾಧನೆಗಳೇನು ಎಂದು ಪ್ರಶ್ನಿಸಿ ಬಿಜೆಪಿಯಿಂದ ಮಾತ್ರ ಸದೃಢ ಸರ್ಕಾರ ನೀಡಲು ಸಾಧ್ಯ ಎಂದು ಹೇಳಿದರು.