ಕಾರವಾರ, ಜೂನ್. 7, ನ್ಯೂಸ್ ಎಕ್ಸ್ ಪ್ರೆಸ್ : ಜೋಯಿಡಾದಲ್ಲಿ 5 ಕಾಡುಕೋಣಗಳು ಸಾವಿಗೀಡಾಗಿದ್ದು, ಪ್ರಾಣಿ ಪ್ರಿಯರಲ್ಲಿ ಆತಂಕ ಮೂಡಿಸಿದೆ. ಏತನ್ಮಧ್ಯೆ, ಕಾಡುಕೋಣಗಳ ಸಾವಿಗೆ ಸಾಂಕ್ರಾಮಿಕ ರೋಗ ಕಾರಣ ಎಂಬ ಸುದ್ದಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಮೃತ ಕಾಡುಕೋಣಗಳ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ.
ಕುಂಬಾರವಾಡದಲ್ಲಿ ಎರಡು ಕಾಡುಕೋಣಗಳು ಪರಸ್ಪರ ಕಾಳಗದಲ್ಲಿ ಮೃತಪಟ್ಟಿವೆ. ಅಣಶಿ ವಲಯದಲ್ಲಿ ಒಂದು ಕಾಡುಕೋಣ ದಿಬ್ಬವನ್ನು ಏರುವಾಗ ಬಿದ್ದು ಮೃತಪಟ್ಟಿದೆ. ಗುಂದ ಹಾಗೂ ಶಿವಪುರ ಗಡಿಯಲ್ಲಿ ಆಹಾರ ಜೀರ್ಣವಾಗದೆ ಕಾಡುಕೋಣವೊಂದು ಮೃತಪಟ್ಟಿದೆ. ಮೇಲ್ನೋಟಕ್ಕೆ ಈ ಐದೂ ಕಾಡುಕೋಣಗಳು ಸಾಂಕ್ರಾಮಿಕ ಕಾಯಿಲೆಯಿಂದ ಮೃತಪಟ್ಟಿರುವಂತೆ ಕಾಣುತ್ತಿಲ್ಲ. ಮೇಲಾಗಿ ಈ ಸಾವು ಒಂದೇ ಪ್ರದೇಶದಲ್ಲಿ ಆಗಿಲ್ಲ. 40-50 ಕಿ.ಮೀ.ದೂರದಲ್ಲಿ ಇವು ಸತ್ತಿವೆ ಎಂದು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.