ಶಿವಮೊಗ್ಗ, ಫೆ. 01: ಭರವಸೆಯ ಬೆಳಕನ್ನು ನೀಡಿದ ಕೇಂದ್ರ ಬಜೆಟ್ ನಲ್ಲಿ ಘೋಷಣೆಯಾಗಿರುವ ಯೋಜನೆಗಳು ದೂರದೃಷ್ಟಿಯನ್ನು ಹೊಂದಿದೆ. ಅನ್ನದಾತನನ್ನು ದೃಷ್ಟಿಯಲ್ಲಿರಿಸಿಕೊಂಡು ಮಂಡಿಸಲಾಗಿರುವ ಬಜೆಟ್ ನಲ್ಲಿ ಉದ್ಯೋಗ ಸೃಷ್ಟಿಗೆ ಆದ್ಯತೆ, ಸ್ವಾವಲಂಬನೆಗೆ ಉತ್ತೇಜನ ಕೊಟ್ಟಿರುವುದು ಸ್ವಾಗತಾರ್ಹ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ತೆರಿಗೆ ಹೊರೆ ವಿಧಿಸದ ಹಣಕಾಸು ಸಚಿವರ ಕ್ರಮವನ್ನು ಸ್ವಾಗತಿಸುತ್ತೇನೆ. ಗ್ರಾಮೀಣಾಭಿವೃದ್ಧಿಗೆ ಸುಮಾರು 1 ಲಕ್ಷ 23 ಸಾವಿರ ಕೋಟಿ ರೂ ನೀಡಿರುವ ಕೇಂದ್ರ ಬಜೆಟ್ ನಲ್ಲಿ ರೈತರ ಆದಾಯ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗಿದೆ. ವಿದ್ಯುತ್ ಸ್ವಾವಲಂಬನೆಗೆ ಆದ್ಯತೆ ನೀಡಲಾಗಿದ್ದು, ದೇಶದ ಜಿಡಿಪಿ ಪ್ರಗತಿಗೆ ಒತ್ತು ಕೊಡಲಾಗಿದೆ. ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆಗೆ ಒತ್ತು ನೀಡಿದ್ದು, ತೆರಿಗೆದಾರರ ಹಿತ ಕಾಯುವ ಭರವಸೆ ಸಿಕ್ಕಿದೆ ಎಂದು ಬಜೆಟ್ ನ್ನು ಸ್ವಾಗತಿಸಿದರು.