ಹುಬ್ಬಳ್ಳಿ: ಕುಂದಗೋಳ ಹಾಗೂ ಶಿಗ್ಗಾವಿ ಸುತ್ತಮುತ್ತ ಸುರಿದ ಭಾರಿ ಮಳೆಯಿಂದ ನಗರದ ಹೊರ ವಲಯದ ಕುಂದಗೋಳ ಕ್ರಾಸ್ ಬಳಿಯ ಹಳ್ಳ ತುಂಬಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-೪ಕ್ಕೆ ನೀರು ನುಗ್ಗಿದ ಪರಿಣಾಮ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯಾಯಿತು.
ಈ ಪ್ರದೇಶಗಳಲ್ಲಿ ಸುರಿದ ಮಳೆಯಿಂದ ರಭಸವಾಗಿ ಹರಿದು ಬಂದು ಹಳ್ಳದ ನೀರು ಕುಂದಗೋಳ ಕ್ರಾಸ್ ಸಮೀಪದ ರಾಷ್ಟ್ರೀಯ ಹೆದ್ದಾರಿ ಮೇಲೆ ಬಂದಿದೆ. ಈ ಹೆದ್ದಾರಿಯಲ್ಲಿ ಷಟ್ಪಥ ರಸ್ತೆ ಹಾಗೂ ಹಳ್ಳದ ಮೇಲೆ ಸೇತುವೆ ಕಾಮಗಾರಿ ನಡೆಯುತ್ತಿರುವುದರಿಂದ ಹಳ್ಳದ ನೀರೆಲ್ಲ ರಾಷ್ಟ್ರೀಯ ಹೆದ್ದಾರಿ ಮಾರ್ಗ ಆವರಿಸಿತ್ತು.
ಇದರಿಂದ ಹುಬ್ಬಳ್ಳಿ-ಹಾವೇರಿ ನಡುವಿನ ಸಂಚಾರ ಕೆಲ ಕಾಲ ಸ್ಥಗಿತಗೊಂಡಿತ್ತು. ಹೆದ್ದಾರಿಯ ಎರಡು ಬದಿಯಲ್ಲಿ ಸುಮಾರು ೩-೪ ಕಿಮೀ ದೂರದಷ್ಟು ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಾಹನ ಸವಾರರು ಹಾಗೂ ಪ್ರಯಾಣಿಕರು ಸಮಸ್ಯೆ ಅನುಭವಿಸಬೇಕಾಯಿತು.
ರೋಗಿಗಳನ್ನು ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ವಾಹನಗಳ ಚಾಲಕರು ಸಹಿತ ವಾಹನಗಳು ಸಾಲುಗಟ್ಟಿ ನಿಂತಿದ್ದಕ್ಕೆ ಮುಂದೆ ಸಾಗಲಾಗದೆ ಪರಿತಪಿಸಬೇಕಾಯಿತು. ಹಳ್ಳದ ನೀರಿನ ಹರಿವು ಕ್ರಮೇಣ ಕಡಿಮೆಯಾಗುತ್ತಿದ್ದಂತೆ ಒಂದೊAದಾಗಿ ವಾಹನಗಳು ಮುಂದೆ ಸಾಗಿದವು. ಸ್ಥಳಕ್ಕೆ ಗ್ರಾಮೀಣ ತಹಶೀಲ್ದಾರ್ ಪ್ರಕಾಶ ನಾಶಿ ಹಾಗೂ ಗ್ರಾಮೀಣ ಠಾಣೆ ಪೊಲೀಸರು ತೆರಳಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿದರು.