ಶಿವಮೊಗ್ಗ: ಕೋಟ್ಯಂತರ ರಾಮಭಕ್ತರ ಕನಸು ಈಡೇರಿದೆ.ಸೀತೆಯ ರಾಮನಿಗೊಂದು ಆಲಯ ನಿರ್ಮಿಸಬೇಕು, ಕಲಿಯುಗದಲ್ಲಿ ಆತ ಅನುಭವಿಸುತ್ತಿರುವ ವನವಾಸವನ್ನು ಅಂತ್ಯಗೊಳಿಸಬೇಕು ಎಂದು ಹಲವು ತಲೆಮಾರುಗಳಿಂದ ಕಾಯಲಾಗುತ್ತಿತ್ತು. ಆ ಕನಸು ಈಡೇರಿದೆ.
ರಾಮನಿಗೊಂದು ಭವ್ಯವಾದ ಆಲಯ ತಲೆ ಎತ್ತಲಿದೆ ಎಂದು ಜನ ಸಂಭ್ರಮಿಸುತ್ತಿದ್ದರೆ. ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಈ ವಿಷಯದಲ್ಲೂ ಶಾಂತಿ ಕದಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ಮಸೀದಿ ಕೆಡವಿ ಹಾಕುವ ಮಾತನಾಡಿರುವ ಅವರು ಸಚಿವರಾಗಿ ಮುಂದುವರಿಯಲು ನಿಜಕ್ಕೂ ಅವರು ಯೋಗ್ಯರೇ ಎನ್ನುವ ಪ್ರಶ್ನೆ ಹುಟ್ಟು ಹಾಕಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ಮಸೀದಿ ತೆರವುಗೊಳಿಸಿ ರಾಮ ಮಂದಿರ ನಿರ್ಮಾಣವಾದಂತೆ ಕಾಶಿ ಹಾಗೂ ಮಥುರಾದಲ್ಲಿ ಇರುವ ಮಸೀದಿ ಸಹ ಧ್ವಂಸವಾಗಬೇಕಿದೆ ಎಂದಿದ್ದಾರೆ.
ಕಾಶಿ ಹಾಗೂ ಮಥುರಾಗೆ ತೆರಳಿದರೆ ನಾವು ಗುಲಾಮರೇ ಅನ್ನುವಂತಾಗುತ್ತದೆ. ದೇವಾಲಯದ ಪಕ್ಕದಲ್ಲಿಯೇ ಮಸೀದಿ ಇರುವುದೇ ಇದಕ್ಕೆ ಕಾರಣ. ಹೀಗಾಗಿ ಅಲ್ಲಿ ಭಕ್ತಿಯಿಂದ ಪೂಜೆ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಅಲ್ಲಿರೋ ಮಸೀದಿಗಳು ನಮ್ಮನ್ನು ಗುಲಾಮರೆನ್ನುವಂತೆ ನೋಡುತ್ತವೆ.
ಇದೀಗ ಅಯೋಧ್ಯೆಯಲ್ಲಿ ಗುಲಾಮಗಿರಿಯ ಸಂಕೇತವಾಗಿದ್ದ ಮಸೀದಿ ಮರೆಯಾಗಿದೆ. ಅದೇ ರೀತಿ ಕಾಶಿ ಹಾಗೂ ಮಥುರಾದಲ್ಲಿ ಮಸೀದಿಗಳನ್ನು ಮರೆಯಾಗಬೇಕಾಗಿದೆ. ಇಂದಲ್ಲ ನಾಳೆ ಕಾಶಿ ಹಾಗೂ ಮಥುರಾದಲ್ಲಿ ಮಸೀದಿ ಧ್ವಂಸವಾಗುತ್ತದೆ ಎಂದು ಸಚಿವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.