ಬೆಂಗಳೂರು, ಏ.8 : ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಆರೋಗ್ಯ ಸೇತು ಆ್ಯಪ್ ಬಗ್ಗೆ ಜನಜಾಗೃತಿ ಮೂಡಿಸಲು ಕೈ ಜೋಡಿಸುವಂತೆ ಪವರ್ ಸ್ಟಾರ್ ನಟ ಪುನೀತ್ ರಾಜ್ ಕುಮಾರ್ ಅವರಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಮನವಿ ಮಾಡಿದ್ದಾರೆ.
ಪುನೀತ್ ರಾಜಕುಮಾರ್ ಅವರನ್ನು ಡಾ.ಅಶ್ವತ್ಥನಾರಾಯಣ ಬುಧವಾರ ಭೇಟಿ ಮಾಡಿ ಆರೋಗ್ಯ ಸೇತು ಆ್ಯಪ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು. ಅಲ್ಲದೆ, “ಕೊವಿಡ್-19 ಬಗ್ಗೆ ಎಲ್ಲರಿಗೂ ಸರಿಯಾದ ಮಾಹಿತಿ ತಲುಪುವುದು ಅವಶ್ಯಕ. ಆ ನಿಟ್ಟಿನಲ್ಲಿ ಆರೋಗ್ಯ ಸೇತು ಆ್ಯಪ್ ಹೆಚ್ಚು ಅನುಕೂಲ. ಆದ್ದರಿಂದ ಎಲ್ಲರೂ ಒಟ್ಟಾಗಿ ಆ್ಯಪ್ ಬಗ್ಗೆ ಜಾಗೃತಿ ಮೂಡಿಸೋಣ” ಎಂದು ಮನವಿ ಮಾಡಿದರು.
ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಅವರ ಮನವಿಗೆ ಸ್ಪಂದಿಸಿದ ಪುನೀತ್ ರಾಜ್ ಕುಮಾರ್ ತಕ್ಷಣ ತಮ್ಮ ಮೊಬೈಲ್ನಲ್ಲಿ ಆ್ಯಪ್ ಡೌನ್ ಲೌಡ್ ಮಾಡಿಕೊಂಡರಲ್ಲದೆ, ಸರ್ಕಾರಕ್ಕೆ ಎಲ್ಲಾ ರೀತಿಯಲ್ಲೂ ಸಹಕರಿಸಲು ತಾವು ಸಿದ್ಧ ಎಂದು ಭರವಸೆ ನೀಡಿದರು.
“ಮೊಬೈಲ್ ಬಳಸುವ ಪ್ರತಿಯೊಬ್ಬರೂ ಆರೋಗ್ಯ ಸೇತು ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಆ್ಯಪ್ನಲ್ಲಿ ರೋಗ ಲಕ್ಷಣಗಳನ್ನು ದಾಖಲಿಸಿದ ಕೂಡಲೇ, ಸಂಬಂಧ ಪಟ್ಟವರಿಗೆ ಮಾಹಿತಿ ರವಾನೆಯಾಗುವುದು. ಅಂಕಿ ಅಂಶಗಳ ಸಂಗ್ರಹಣೆ ಜತೆಗೆ ಸಂಪರ್ಕ ಜಾಲ ಬೆಳೆಸಿಕೊಳ್ಳಲು ಆ್ಯಪ್ ನೆರವಾಗಲಿದೆ. ಜತೆಗೆ, ಮಾಹಿತಿ ಒದಗಿಸುವ ವ್ಯಕ್ತಿ ಇರುವ ಸ್ಥಳವನ್ನೂ ಸುಲಭವಾಗಿ ಪತ್ತೆ ಮಾಡುವಂಥ ವ್ಯವಸ್ಥೆ ಆ್ಯಪ್ನಲ್ಲಿದೆ,”ಎಂದು ವಿವರಿಸಿದರು.