ಕೆ.ಆರ್.ಪುರ, ಜ. 16: ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸೂರ್ಯ ತನ್ನ ಪಥ ಬದಲಿಸುವ ನೈಸರ್ಗಿಕ ಕ್ರಿಯೆ ‘ಮಕರ ಸಂಕ್ರಾಂತಿ’ ಹಬ್ಬದ ವಿಶೇಷ ಎಂದು ಬಿಎಂಟಿಸಿ ಅಧ್ಯಕ್ಷ ಎನ್.ಎಸ್.ನಂದೀಶ್ ರೆಡ್ಡಿ ತಿಳಿಸಿದರು.
ಸಂಕ್ರಾಂತಿ ಹಬ್ಬದ ಅಂಗವಾಗಿ ತಮ್ಮ ಮನೆಯಲ್ಲಿ ಸಾಕಿರುವ ರಾಸುಗಳಿಗೆ ಪ್ರತಿ ವರ್ಷದಂತೆ ಈ ವರ್ಷವೂ ಅಲಂಕಾರ ಮಾಡಿ ಪೂಜೆ ನೆರವೇರಿಸಿ ನಂತರ ಕಿಚ್ಚು ಹಾಯಿಸಿ ಹಬ್ಬವನ್ನು ಆಚರಿಸಿದರು.
ಪೂಜೆ ನಂತರ ಮಾತನಾಡಿದ ನಂದೀಶ್ ರೆಡ್ಡಿ ಅವರು, ಸುಗ್ಗಿಯ ಹಬ್ಬವಾದ ಮಕರ ಸಂಕ್ರಾಂತಿ ಎಲ್ಲರಿಗೂ ಸಮೃದ್ಧಿ, ನೆಮ್ಮದಿ ಹಾಗೂ ಸಂತೋಷ ತರಲಿ ಎಂದು ಶುಭ ಹಾರೈಸಿದರು.
ಇತ್ತೀಚಿನ ದಿನಗಳಲ್ಲಿ ಹಳ್ಳಿ ಪ್ರದೇಶಗಳಲ್ಲೂ ಸಹಾ ರಾಸುಗಳ ಸಂಖ್ಯೆ ನಶಿಸಿಹೋಗುತ್ತಿದೆ, ಹಸುಗಳನ್ನು ಸಾಕುವುದರಿಂದ ಅನೇಕ ಉಪಯೋಗಗಳಿವೆ, ರಾಸುಗಳಿರುವ ಸುತ್ತಮುತ್ತಲಿನ ಪರಿಸರ ಆರೋಗ್ಯಕರ ವಾಗಿತ್ತವೆ ಎಂದು ಹೇಳಿದರು. ನಮ್ಮ ಸಂಸ್ಕೃತಿಯನ್ನು ಕಾಪಾಡುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹೇಳಿದರು.
ವ್ಯವಸಾಯಕ್ಕೆ ಹೆಗಲು ನೀಡುವ ಎತ್ತುಗಳನ್ನು ಸಿಂಗರಿಸಿ, ಮೆರವಣಿಗೆ ಮಾಡಿ ಮತ್ತು ಆನಂದಿಸುವ ಸಂಭ್ರಮದ ಹಬ್ಬ ಇದಾಗಿದೆ ಎಂದು ತಿಳಿಸಿದರು. ಮಂಗಳವಾರ ದಿನ ಬಿಎಂಟಿಸಿ ಸಿಬ್ಬಂದಿಯೊಂದಿಗೆ ಎಳ್ಳು ಬೆಲ್ಲ ಹಂಚಿ ಸಂಕ್ರಾಂತಿ ಆಚರಿಸಿದ್ದು, ಬುಧವಾರ ತಮ್ಮ ಕುಟುಂಬದೊಂದಿಗೆ ಆಚರಣೆ ಮಾಡಿರುವುದಾಗಿ ತಿಳಿಸಿದರು.