ಬೆಂಗಳೂರು,ಜ.11: ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆಯಿಲ್ಲ. ವಾಸ್ತವದಲ್ಲಿರುವ ಉದ್ಯೋಗ ಭರ್ತಿ ಮಾಡಲು ಸೂಕ್ತ ಉದ್ಯೋಗಿಗಳೇ ಸಿಗುತ್ತಿಲ್ಲ ಎಂಬ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿರುವ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ, ಇಂತಹ ಹೇಳಿಕೆ ಬೌದ್ಧಿಕ ದಿವಾಳಿತನದಿಂದ ಕೂಡಿದೆ ಎಂದಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡುತ್ತ, “ರಾಜ್ಯದಲ್ಲಿ ಶೇ.100ರಷ್ಟು ಉದ್ಯೋಗಿಗಲಿದ್ದರೆ ಶೇ.106ರಷ್ಟು ಉದ್ಯೋಗವಿದೆ. ಐದೂವರೆ ಲಕ್ಷ ಅಭ್ಯರ್ಥಿಗಳು ಪರೀಕ್ಷೆ ಪೂರೈಸಿ ಪಾಸಾಗಿ ಬಂದರೆ ಐದೂ ಮುಕ್ಕಾಲು ಲಕ್ಷ ಉದ್ಯೋಗ ಭರ್ತಿ ಮಾಡುವ ಪರಿಸ್ಥಿತಿ ಇದೆ” ಎಂದು ಅಶ್ವತ್ಥನಾರಾಯಣ ಹೇಳಿದ್ದರು.
ಟ್ವೀಟ್ ಮೂಲಕ ಹಂಚಿಕೊಂಡಿರುವ ಎಚ್ಡಿ ಕುಮಾರಸ್ವಾಮಿ “ಪಕೋಡ ತಯಾರಿಸಲು ಕೂಡ ಈರುಳ್ಳಿ ಕೊಳ್ಳಲೂ ಆರ್ಥಿಕವಾಗಿ ನಿಶಕ್ತರಾಗಿರುವ ನಿರುದ್ಯೋಗಿಗಳ ಕಣ್ಣಲ್ಲೇಕೆ ನೀರು ತರಿಸುವಿರಿ ಎಂದು ಉಪಮುಖ್ಯಮಂತ್ರಿ ಅವರನ್ನು ಪ್ರಶ್ನೆ ಮಾಡಿದ್ದಾರೆ.