ಮೈಸೂರು, ನ. 9 : ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ಹುಂಡಿ ಎಣಿಕಾ ಕಾರ್ಯ ನಡೆದಿದ್ದು, 96 ಲಕ್ಷ ರೂ. ಸಂಗ್ರಹವಾಗಿದೆ.
ದೇವಸ್ಥಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರವೀಂದ್ರ ಅವರ ನೇತೃತ್ವದಲ್ಲಿ ಹುಂಡಿ ಎಣಿಕಾ ಕಾರ್ಯ ನಡೆದಿದ್ದು, ಹುಂಡಿಯಲ್ಲಿ 96,17,234ರೂ. ಸಂಗ್ರಹವಾಗಿದೆ. ಅಲ್ಲದೆ, 34 ಗ್ರಾಂ ಚಿನ್ನ, 1800 ಗ್ರಾಂ ಬೆಳ್ಳಿಯನ್ನು ಸಹ ಭಕ್ತಾದಿಗಳು ಶ್ರೀಕಂಠೇಶ್ವರನಿಗೆ ಕಾಣಿಕೆ ರೂಪದಲ್ಲಿ ಹಾಕಿದ್ದಾರೆ. ಇದಲ್ಲದೆ, ವಿದೇಶಿ ಕರೆನ್ಸಿಗಳು ಸಹ ಹುಂಡಿಯಲ್ಲಿ ದೊರೆತಿದೆ. ಅಮಾನ್ಯವಾಗಿರುವ 500 ಹಾಗೂ 1000ರೂ. ನೋಟುಗಳು ಸಹ ಹುಂಡಿಯಲ್ಲಿ ಕಾಣಿಸಿಕೊಂಡಿವೆ. ಕಳೆದ ಬಾರಿಗಿಂತ ಈ ಬಾರಿ 10 ಲಕ್ಷ ರೂ. ಹೆಚ್ಚಳವಾಗಿದೆ ಎಂದು ರವೀಂದ್ರ ಅವರು ತಿಳಿಸಿದ್ದಾರೆ.