ರಾಮನಗರ, ಅ. 24: ರೇಷ್ಮೆ ನಗರಿ ರಾಮನಗರದ ರಸ್ತೆಗಳಿಗೆ ಇಳಿಯುವ ಮುನ್ನ ಹತ್ತಾರು ಬಾರಿ ಯೋಚನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ.
ನಗರದ ಪ್ರತಿಷ್ಠಿತ ಬಡಾವಣೆಗಳನ್ನು ಸಂಪರ್ಕಿಸುವ ರಸ್ತೆಗಳಿಂದ ಆರಂಭಗೊಂಡು, ಗ್ರಾಮೀಣ ಸಂಪರ್ಕ ರಸ್ತೆಗಳವರೆಗೂ ಎಲ್ಲೆಡೆ ಗುಂಡಿ ಬಿದ್ದಿದ್ದು, ಸಾರ್ವಜನಿಕರು ಸ್ಥಳೀಯ ಆಡಳಿತಕ್ಕೆ ಹಿಡಿಶಾಪ ಹಾಕುತ್ತಲೇ ವಾಹನ ಚಾಲನೆ ಮಾಡುವಂತೆ ಆಗಿದೆ.
ನಗರದ ರೋಟರಿ ಸರ್ಕಲ್ ವೃತ್ತದಿಂದ ಎಂ.ಎಚ್. ಶಾಲೆಗೆ ತೆರಳುವ ಮಾರ್ಗ ಸಂಪೂರ್ಣ ಹಾಳಾಗಿದೆ. ವಿವಿಧ ಕಾಮಗಾರಿಗಳಿಗಾಗಿ ತೆಗೆದ ಗುಂಡಿಗಳನ್ನು ಮುಚ್ಚದೇ ಹಾಗೆ ಬಿಟ್ಟಿರುವುದರಿಂದ ಎಲ್ಲೆಂದರಲ್ಲಿ ದೊಡ್ಡ ಗುಂಡಿಗಳು ಸೃಷ್ಟಿಯಾಗಿವೆ. ಮಳೆ ಬಂತೆಂದರೆ ಇಲ್ಲಿ ಓಡಾಡಲು ಸಾಧ್ಯವೇ ಇಲ್ಲದಂತಾಗಿದೆ. ಪ್ರತಿದಿನ ಇದೇ ಮಾರ್ಗದಲ್ಲಿ ಸಾವಿರಾರು ವಿದ್ಯಾರ್ಥಿಗಳು ಓಡಾಡುತ್ತಿದ್ದರೂ, ನಗರಸಭೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ.
ಲಕ್ಷ್ಮೀಪುರ ಮಾರ್ಗವಾಗಿ ಮಾಗಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹಳೇ ಜಿಲ್ಲಾ ಪಂಚಾಯಿತಿ ಕಚೇರಿಯಿಂದ ಆರಂಭಗೊಂಡ, ಮೊರಾರ್ಜಿ ದೇಸಾಯಿ ವಸತಿ ಶಾಲೆವರೆಗಿನ ರಸ್ತೆ ದುರಸ್ತಿ ಮಾಡಲು ಇದುವರೆಗೂ ನಗರಸಭೆಗಾಗಲೀ, ಲೋಕೋಪಯೋಗಿ ಇಲಾಖೆಗಾಗಲಿ ಸಾಧ್ಯವೇ ಆಗಿಲ್ಲ. ಪದೇ ಪದೆ ಗುಂಡಿ ಬೀಳುವ ರಸ್ತೆಯಲ್ಲಿ ವಾಹನ ಸವಾರರು ಬಿದ್ದು ಗಾಯಗೊಂಡಿದ್ದು, ಪ್ರತಿ ಬಾರಿಯೂ ತಾತ್ಕಾಲಿಕವಾಗಿ ತೇಪೆ ಹಾಕುವ ಕೆಲಸ ಮಾಡುವ ನಗರಸಭೆ ಅಧಿಕಾರಿಗಳು ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ವಿಫಲವಾಗಿದ್ದಾರೆ.