ದೇವನಹಳ್ಳಿ, ಆ. 23: ತಾಲೂಕಿನ ಕುಂದಾಣ ಹೋಬಳಿಯಾದ್ಯಂತ 78ಸರಕಾರಿ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, 14ಅನುದಾನರಹಿತ ಶಾಲೆಗಳಲ್ಲಿ 9 ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ ಒಂದು ಅನುದಾನಿತ ಶಾಲೆ ಇದೆ. 41 ಪ್ರಾಥಮಿಕ ಶಾಲೆಗಳು 29, ಪ್ರೌಢ ಶಾಲೆಗಳು ಇವೆ. ಅದರಲ್ಲಿಯೂ ಸಹ ಸರ್ಕಾರಿ ಶಾಲೆಗಳಿಗೆ ಹೆಚ್ಚು ಒತ್ತು ನೀಡುತ್ತಿರುವ ರಾಜ್ಯ ಸರಕಾರದ ಯೋಜನೆಗಳಿಂದ ಮಕ್ಕಳನ್ನು ಸೆಳೆಯುವ ಕಾರ್ಯದಲ್ಲಿದ್ದರೆ. ಇಲ್ಲಿನ ಸರ್ಕಾರಿಶಾಲೆಗಳು ಒಂದಾದರೊಂದರಂತೆ ಏನಾದರೊಂದು ಸಮಸ್ಯೆಯಿಂದ ಶಾಲೆ ಮುಚ್ಚುವ ಹಂತಕ್ಕೆ ಹೋಗುತ್ತಿದೆ.
ಈಗಾಗಲೇ ತಾಲೂಕಿನ ಕುಂದಾಣ ಹೋಬಳಿಯ ನೆರಗನಹಳ್ಳಿ ಸರಕಾರಿ ಶಾಲೆಯಲ್ಲಿ ಕೇವಲ 6ವಿದ್ಯಾರ್ಥಿಳಿದ್ದರೆ, ನಾಗಮಂಗಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ಮುಚ್ಚಿಹೋಗಿರುವುದು ವಿಪರ್ಯಾಸವಾಗಿದೆ.
ಜುಟ್ಟನಹಳ್ಳಿ ಗ್ರಾಮದಲ್ಲಿರುವ ಸರ್ಕಾರಿಹಿರಿಯ ಪ್ರಾಥಮಿಕ ಶಾಲೆಯಲ್ಲಿ 2019-20ರ ಶೈಕ್ಷಣಿಕ ಸಾಲಿನಲ್ಲಿ 1ನೇ, 2ನೇ ಹಾಗೂ 4ನೇ ತರಗತಿಯಲ್ಲಿ ಮಕ್ಕಳೇ ಇಲ್ಲ, 3ನೇ ತರಗತಿಯಲ್ಲಿ 1, ಐದನೇ ತರಗತಿಯಲ್ಲಿ 2,6 ಮತ್ತು 7ನೇ ತರಗತಿಗೆ ತಲಾ ಒಂದರಂತೆ ಒಟ್ಟು 6 ವಿದ್ಯಾರ್ಥಿಗಳು ಇಡೀ ಶಾಲೆಗೆ ಇದ್ದಾರೆ. 6 ಮಕ್ಕಳನ್ನು ಒಳಗೊಂಡಂತ ಶಾಲೆಯಲ್ಲಿ ಇಬ್ಬರು ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ.
ದಾಖಲಾತಿ ಕ್ಷೀಣಿಸಲು ಕಾರಣ
1992ರಲ್ಲಿ ಜುಟ್ಟನಹಳ್ಳಿ ಸರ್ಕಾರಿಹಿರಿಯ ಪ್ರಾಥಮಿಕ ಶಾಲೆಯಲ್ಲಿ 42 ವಿದ್ಯಾರ್ಥಿಗಳು ಒಂದೇ ಕೊಠಡಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು. ವರ್ಷ ಕಳೆದಂತೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಾ ಹೋಯಿತು. ಆದರೆ ಶಾಲೆಯು ಹೆಚ್ಚಿನ ವಿಸ್ತೀರ್ಣ ಹೊಂದಿದ್ದು, ಇಷ್ಟು ಸುಸ್ಸಜ್ಜಿತವಾದ ಆಟದ ಮೈದಾನವನ್ನು ಹೊಂದಿದೆ. ಆವರಣದಲ್ಲಿಯೇ ಅಂಗನವಾಡಿ ಕೇಂದ್ರವೂ ಸಹ ಇದ್ದು, ಅದರಲ್ಲಿ 10 ಮಕ್ಕಳಿದ್ದಾರೆ. ಇಡೀ ಜುಟ್ಟನಹಳ್ಳಿ ಗ್ರಾಮದಲ್ಲಿರುವ 6-7 ಮಕ್ಕಳು ಮಾತ್ರ ಈ ಶಾಲೆಗೆ ಬರುತ್ತಿದ್ದಾರೆ. ಅಕ್ಕಪಕ್ಕದ ಗ್ರಾಮದ ಮಕ್ಕಳು ಅರದೇಶನಹಳ್ಳಿಯ ಇಂಗ್ಲೀಷ್ ಮೀಡಿಯಂ ಶಾಲೆಗೆ ಸೇರಿದ್ದಾರೆ. ಇದೀಗ ಬೆರಳಣಿಕೆಯಷ್ಟು ಮಕ್ಕಳು ಮಾತ್ರ ಈ ಶಾಲೆಗೆ ಬರುತ್ತಿದ್ದಾರೆ. ಶಾಲೆಯಲ್ಲಿ 2 ಶಿಕ್ಷಕರಿದ್ದು, ಇಬ್ಬರ ಶಿಕ್ಷಕರ ಸಂಬಳ ಹಾಗೂ ವಿದ್ಯಾರ್ಥಿಗಳ ತಿಂಗಳ ಖರ್ಚು ಸರಕಾರ ಭರಿಸುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ.
ಖಾಸಗಿ ಶಾಲೆಗಳ ವ್ಯಾಮೋಹ
ತಾಲೂಕಿನಲ್ಲಿ ಖಾಸಗಿ ಶಾಲೆಗಳು ಹೆಚ್ಚು ಇದ್ದು, ಜೊತೆಗೆ ಸರ್ಕಾರಿ ಶಾಲೆಯಲ್ಲಿ ಆಂಗ್ಲ ಮಾದ್ಯಮ ದಾಖಲಾತಿ ಪ್ರಾರಂಭಿಸಿರುವುದು ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳ ದಾಖಲಾತಿ ಹಿಂದಿಕ್ಕುವಂತೆ ಆಗಿದೆ. ಸರ್ಕಾರಿ ಶಾಲೆಯಲ್ಲಿ ಎಲ್ಲಾ ಸೌಲಭ್ಯ ಇದ್ದರೂ ಸಹ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸಿಕೊಡುತ್ತಿರುವುದು ಈ ಭಾಗದಲ್ಲಿ ಹೆಚ್ಚು ಇದೆ.
ನಾರಾಯಣಸ್ವಾಮಿ ಪೋಷಕರು
ಜುಟ್ಟನಹಳ್ಳಿ ಸರಕಾರಿ ಶಾಲೆಯುವ ವ್ಯವಸ್ಥಿತವಾಗಿದ್ದರೂ ಸಹ ಆಂಗ್ಲ ಮಾಧ್ಯಮದ ವ್ಯಾಮೋಹದಿಂದ ಪೋಷಕರು ಸ್ಥಳೀಯ ಖಾಸಗಿ ಶಾಲೆ ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಿರ್ಮಾಣಗೊಂಡಿರುವ ಸುಸ್ಸಜ್ಜಿತವಾದ ಸರ್ಕಾರಿ ಶಾಲೆಗೆ ಇಲ್ಲಿನ ಸುಮಾರು ಮಕ್ಕಳು ಅಲ್ಲಿಗೆ ಹೋಗುತ್ತಿದ್ದಾರೆ. ಆರ್ಟಿಇ ಶೇ.25ರಷ್ಟು ಆಗಿದ್ದರಿಂದ 3 ವರ್ಷದಲ್ಲಿ ಎಲ್ಲಾ ಶಾಲೆಗಳಿಗೆ ಮಕ್ಕಳು ಚದುರಿ ಹೋಗಿದ್ದಾರೆ ಎಂದು ಮಂಜುಳ, ಪ್ರಭಾರ ಮುಖ್ಯ ಶಿಕ್ಷಕಿ ಯವರು ತಿಳಿಸಿದ್ದಾರೆ.