ಕೆ.ಆರ್.ಪುರ, ಆ. 6: ಕೇಂದ್ರ ಆಡಳಿತದ ಬಿಜೆಪಿ ಸರ್ಕಾರ ಜಮ್ಮು ಮತ್ತು ಕಾಶ್ಮೀರ ವಿಷಯದಲ್ಲಿ 370 & 35(A) ವಿಧಿಯನ್ನು ರದ್ದುಗೊಳಿಸಿ ಜಮ್ಮು ಕಾಶ್ಮೀರ ಮತ್ತು ಲಡಾಖ್ ರಾಜ್ಯಗಳನ್ನಾಗಿ ವಿಂಗಡನೆ ಮಾಡಿ ತೆಗೆದುಕೊಂಡ ನಿರ್ಣಯ ಸ್ವಾತಂತ್ರ್ಯನಂತರದ ಇತಿಹಾಸದಲ್ಲಿಯೇ ಐತಿಹಾಸಿಕ ದಿಟ್ಟ ನಿಲುವೆಂದೆ ಶಾಸಕಿ ಪೂರ್ಣಿಮಾ ಶ್ರೀನಿವಾಸ ಹೇಳಿದರು.
ಕೆ.ಆರ್.ಪುರ ಬಿಬಿಎಂಪಿ ಕಚೇರಿ ಮುಂದೆ ಅವರ ನೇತೃತ್ವದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ತಿನಿಸಿ ವಿಜಯೋತ್ಸವ ಆಚರಿಸಿ ನಂತರ ಮಾತನಾಡಿದ ಅವರು ಒಂದೇ ದೇಶ, ಒಂದೇ ಸಂವಿಧಾನ, ಒಂದೇ ಕಾನೂನು, ಒಂದೇ ಧ್ವಜದ ಕಲ್ಪನೆ ಪ್ರತಿಯೊಬ್ಬ ಭಾರತೀಯರಲ್ಲಿ ಇದ್ದಿದ್ದು ಇಂದಿನ ಐತಿಹಾಸಿಕ ನಿರ್ಣಯದಿಂದ ಆ ಕಲ್ಪನೆ ಸಾಕಾರವಾಗಿದೆ. ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವೆಂದು ಈ ಮೊದಲು ಘೋಷಣೆ ಮಾತ್ರವೇ ಆಗಿತ್ತು . ಇಂದು ಕಾನೂನಿನಲ್ಲಿ ತಿದ್ದುಪಡಿ ತರುವ ಮೂಲಕ ಅದನ್ನು ನಿಜ ಗೊಳಿಸಿದ್ದು, ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುವಂತಹ ವಿಷಯ ಎಂದು ಹೇಳಿದರು.
ಈ ದಿಟ್ಟ ನಿರ್ಧಾರದ ನಿಲುವು ಕೈಗೊಳ್ಳುವಲ್ಲಿ ಯಶಸ್ವಿಯಾದ ಭಾರತದ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ಅವರಿಗೆ ಹಾಗೂ ಗೃಹ ಮಂತ್ರಿಗಳಾದ ಶ್ರೀ ಅಮಿತ್ ಶಾ ಅವರಿಗೂ ಮತ್ತು ಸಚಿವ ಸಂಪುಟದ ಸದಸ್ಯರೆಲ್ಲರು ಸೇರಿದಂತೆ ಸಮಸ್ತ ಅಧಿಕಾರಿ ವೃಂದಕ್ಕೆ ನನ್ನ ಮನಃಪೂರ್ವಕ ಅಭಿನಂದನೆಗಳನ್ನು
ಸಲ್ಲಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ನಂದೀಶ ರೆಡ್ಡಿ, ಬಿಜೆಪಿ ಅಧ್ಯಕ್ಷರು ಚಿದಾನಂದ, ಪಾಲಿಕೆ ಸದಸ್ಯ ಬಂಡೆ ರಾಜು, ಮುಖಂಡರಾದ ಸಚ್ಚಿದಾನಂದ ಮೂರ್ತಿ, ಬಾಕ್ಸರ್ ನಾಗರಾಜ್, ದೇವೇಂದ್ರ, ಶ್ರೀರಾಮ್, ವೀರನ್ನ ಸೇರಿದಂತೆ ಹಲವಾರು ಹಾಜರಿದ್ದರು.