ಹಾಸನ, ಏ. 29, ನ್ಯೂಸ್ ಎಕ್ಸ್ ಪ್ರೆಸ್: ಪಡುವಲಹಿಪ್ಪೆ ಮತಗಟ್ಟೆಯಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿದೆ. ಹಾಗಾಗಿಯೇ ಮೂವರು ಅಧಿಕಾರಿಗಳನ್ನು ಜಿಲ್ಲಾಧಿಕಾರಿ ಅಮಾನತು ಮಾಡಿದ್ದು, ಯಾರ ಕುಮ್ಮಕ್ಕಿನಿಂದ ಅಕ್ರಮ ನಡೆದಿದೆ ಎಂದು ತನಿಖೆ ಆಗಬೇಕು ಎಂದು ಶಾಸಕ ಪ್ರೀತಂ ಜೆ. ಗೌಡ ಒತ್ತಾಯಿಸಿದರು. ಸಚಿವ ರೇವಣ್ಣ ಹೆಸರು ಹೇಳದೆ ಪರೋಕ್ಷವಾಗಿ ಸೋಮವಾರ ಸುದ್ದಿ ಗೋಷ್ಠಿಯಲ್ಲಿ ಕಿಡಿಕಾರಿದರು. ಯಾರು ಆ ಸ್ಥಳದಲ್ಲಿ ನಿಂತು ತಮ್ಮ ಪ್ರಭಾವ ಬೀರಿದ್ದಾರೆ. ಯಾರು ಕೇವಲ ಅರ್ಧಗಂಟೆ ವ್ಯತ್ಯಾಸದಲ್ಲಿ ಒಬ್ಬ ವ್ಯಕ್ತಿ ಎರಡು ಓಟು ಹಾಕಲು ಪ್ರೇರೇಪಿಸಿದ್ದಾರೆ. ಯಾರು ಅಧಿಕಾರಿಗಳೊಂದಿಗೆ ದಬ್ಬಾಳಿಕೆ ಮಾಡಿದ್ದಾರೆ ಎನ್ನುವುದು ಕ್ಯಾಮರಾದಲ್ಲಿ ದಾಖಲಾಗಿದೆ. ಪ್ರಜಾಪ್ರಭುತ್ವ ಕಾಪಾಡಬೇಕಾದ ಜನಪ್ರತಿನಿಧಿಗಳೆ ಹೀಗೆ ಮಾಡಿದ್ರೆ ಜನ ಇದನ್ನು ಗಮನಿಸುತ್ತಾರೆ. ಮಾಜಿ ಪ್ರಧಾನಿ ದೇವೇಗೌಡರು ಎಂದೂ ಇಂತಹ ರಾಜಕಾರಣ ಮಾಡಿಲ್ಲ. ಅವರು ಬಹಳ ಸಭ್ಯ, ಪ್ರಬುದ್ಧ ರೀತಿಯಲ್ಲಿ ಇಡೀ ಜಿಲ್ಲೆ ಮಾದರಿ ರೀತಿಯಲ್ಲಿ ರಾಜಕಾರಣ ಮಾಡಿದ್ದಾರೆ. ಆದ್ರೆ ಅವರ ವ್ಯಕ್ತಿತ್ವಕ್ಕೆ ಚ್ಯುತಿ ಬರುವ ರೀತಿಯಲ್ಲಿ ಅವರದೇ ಊರಿನಲ್ಲಿ ಇಂತಹ ಘಟನೆಯಾಗಿದೆ ಎಂದು ರೇವಣ್ಣ ಕಾಲೆಳೆದರು. ಸರ್ಕಾರದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯಿಂದ ಇಂತಹ ಘಟನೆ ನಡೆಯಬಾರದಿತ್ತು. ಈ ಬಗ್ಗೆ ಚುನಾವಣಾ ಆಯೋಗ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಆಗ್ರಹ. ಯಾರು ಅಧಿಕಾರದ ಮದದಿಂದ ಹೀಗೆ ಮಾಡಿದ್ದಾರೆ ಅವರು ಕಾಲ ಚಕ್ರ ಉರುಳುತ್ತೆ ಎನ್ನೋದನ್ನ ಅರಿಯಲಿ ಇದು 1970, 1990 ರಾಜಕಾರಣ ಅಲ್ಲ, ನವಭಾರತದ 2019ರ ರಾಜಕಾರಣ ಎಂದು ರೇವಣ್ಣಗೆ ಟಾಂಗ್ ನೀಡಿದರು. ಇಲ್ಲಿ ದಬ್ಬಾಳಿಕೆ ರಾಜಕಾರಣಕ್ಕೆ ಆಸ್ಪದ ಇಲ್ಲ. ಅವರು ಮಾಡಿರುವ ಕೃತ್ಯವನ್ನು ಯಾರಾದ್ರು ಸಮರ್ಥನೆ ಮಾಡಿದ್ರೆ ನಾನು ಬಹಿರಂಗ ಕ್ಷಮೆ ಕೇಳುವೆ ಎಂದರು.