ಬೆಂಗಳೂರು: ಬೆಂಗಳೂರು ಬಿಟ್ಟು ಹೋಗುತ್ತಿವೆ ಕಂಪನಿಗಳು ಕೇರಳ ಸರ್ಕಾರದಿಂದ ಐಟಿ ಕಂಪನಿಗಳ ಮುಖ್ಯಸ್ಥರಿಗೆ ಪತ್ರ ಬಂದಿದೆ. ಬೆಂಗಳೂರಲ್ಲಿ ಮುಖ ತೊಳೆಯಲು ಕೂಡ ನೀರಲ್ಲದಿರುವುದರಿಂದ ನಮ್ಮಲ್ಲಿಗೆ ಬನ್ನಿ ಎಂದು ಆಹ್ವಾನಿಸಿದ್ದಾರೆ. ಅನೇಕ ಕಂಪನಿಗಳು ನಗರವನ್ನು ಬಿಟ್ಟು ಹೋಗುತ್ತಿವೆ. ಕಾಂಗ್ರೆಸ್ನ ದುರಾಡಳಿತ, ದುರ್ವರ್ತನೆಯನ್ನು ನೋಡಿ ಜನರು ಕಾಂಗ್ರೆಸ್ಗೆ ಬಾಯ್ ಬಾಯ್ ಹೇಳಲಿದ್ದಾರೆ ಎಂದು ಭವಿಷ್ಯ ನುಡಿದರು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ಆರ್.ಅಶೋಕ್ ಅವರು ಬಿಜೆಪಿ-ಜೆಡಿಎಸ್ ಸಮನ್ವಯ ಸಭೆ ನಡೆಸಿದರು. ನಂತರ ಆರ್.ಅಶೋಕ್ ಸುದ್ದಿಗಾರರ ಬಳಿ ಮಾತನಾಡಿದರು.
ಬೆಂಗಳೂರಿನಲ್ಲಿ ಜನರ ಬಳಿ ಹೋಗಿ ಮತ ಯಾಚಿಸುವ ಧೈರ್ಯ ಬಿಜೆಪಿಗೆ ಇದೆ. ಆದರೆ ಕಾಂಗ್ರೆಸ್ಗೆ ಅಂತಹ ಧೈರ್ಯವಿಲ್ಲ. ಅಲ್ಲದೆ ಜನರು ಕಾಂಗ್ರೆಸ್ಗೆ ಬಾಯ್ ಬಾಯ್ ಹೇಳಲು ತೀರ್ಮಾನಿಸಿದ್ದಾರೆ. ನೀರಿನ ಸಮಸ್ಯೆ ಸೃಷ್ಟಿಯಾಗಿ ಜನರು ಬೆಂಗಳೂರಿಗೆ ಬಾಯ್ ಹೇಳುತ್ತಿದ್ದಾರೆ ಎಂದು ಲೇವಡಿ ಮಾಡಿದರು. ಕಾಂಗ್ರೆಸ್ ಸರ್ಕಾರ ಕಳೆದ ಹತ್ತು ತಿಂಗಳಲ್ಲಿ ಬ್ರ್ಯಾಂಡ್ ಬೆಂಗಳೂರು ಎಂದು ಹಾರ್ಮ್ ಬೆಂಗಳೂರನ್ನು ಸೃಷ್ಟಿಸಿದೆ. ಈಗ ಬಾಯ್ ಬಾಯ್ ಬೆಂಗಳೂರು ಮಾಡಿದ್ದು, ಕುಡಿಯುವ ನೀರಿಲ್ಲದೆ ಜನರು ನಗರವನ್ನು ಬಿಟ್ಟು ಹೊರಟಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.