ಬೆಂಗಳೂರು, ಸೆ. 20: ಆರೋಗ್ಯ, ಮೂಲಭೂತ ಸೌಲಭ್ಯಗಳು ಹಾಗೂ ರಕ್ಷಣೆ ಸೇರಿದಂತೆ ವಿವಿದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿವಿದ ಸಂಘಟನೆಗಳ ಮಹಿಳೆಯರು ಪ್ರತಿಭಟನೆ ನಡೆಸಿದರು.
ಮೆಜೆಸ್ಟಿಕ್ ಸಮೀಪ ಇರುವ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಮೌರ್ಯ ವೃತ್ತದವರೆಗೂ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಮಹಿಳೆಯರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು. ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ಲೈಂಗಿಕ ಕಿರುಕುಳ, ವರದಕ್ಷಿಣೆ ಕಿರುಕುಳ, ದೌರ್ಜನ್ಯ ಹಿಂಸೆ ಪ್ರಕರಣಗಳಲ್ಲಿ ಮಹಿಳೆಯರ ರಕ್ಷಣೆಯ ಅಗತ್ಯವಿದೆ.
ಮಹಿಳೆಯರು ಕೇವಲ ಅಡುಗೆ ಮನೆ, ಮಕ್ಕಳ ಕೆಲಸಕ್ಕೆ ಸೀಮಿತವಾಗದೆ ಸಮಾಜದ ಮುಖ್ಯವಾಹಿನಿಗೆ ಬರುವುದು ಅಗತ್ಯವಾಗಿದೆ. ಇದಕ್ಕಾಗಿ ಆಪ್ತ ಸಮಾಲೋಚನೆ, ಕಾನೂನು ಸಲಹೆ, ಆರ್ಥಿಕ ನೆರವು ಮತ್ತು ಆರ್ಥಿಕ ಸಬಲೀಕರಣಗೊಳ್ಳಲು ರಾಜ್ಯಾದ್ಯಂತ ಸಾಂತ್ವಾನ ಕೇಂದ್ರಗಳನ್ನು ಆರಂಭಿಸುವಂತೆ ಸರ್ಕಾರ ಆದಷ್ಟು ಜರೂರಾಗಿ ನೆರವಿಗೆ ದಾವಿಸುವಂತೆ ಮನವಿ ಮಾಡಿದರು.
ಮಹಿಳಾ ಪ್ರತಿಭಟನಾ ಕಾರರನ್ನುದ್ದೇಶಿಸಿ ಮಾತನಾಡಿದ ಹಂಪಿ ವಿಶ್ವ ವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕಿ ಡಾ.ಎಂ.ಚಂದ್ರ ಪೂಜಾರಿ, ಸ್ತ್ರೀಯರು ಆತ್ಮಗೌರವ ಮತ್ತು ಸ್ವಾವಲಂಬನೆಯ ಜೀವನ ಸಾಗಿಸಲು ಮಾನಸಿಕವಾಗಿ ಸದೃಡವಾಗಬೇಕು, ಸಮಾಜದ ಮುಖ್ಯವಾಹಿನಿಗೆ ಬಂದಾಗ ಮಾತ್ರ ಸಬಲೀಕರಣವಾಗಲು ಸಾದ್ಯ ಎಂದು ಹೇಳಿದರು.
ಭಾರತೀಯ ಮಹಿಳೆಯರಲ್ಲಿ ಸಾಕಷ್ಟು ಸಾಮ್ಯತೆಗಳಿವೆ. ಮಹಿಳಾ ದಿನ ಎನ್ನುವುದು ಪುರುಷ ವಿರೋಧಿ ಆಚರಣೆ ಅಲ್ಲ. ನಮ್ಮೊಳಗೆ ನಾವು ವಿಚಾರ ಚಿಂತನ ಮಂಥನ ಮಾಡಿಕೊಳ್ಳುವುದು ಇಂದಿನ ಅನಿವಾರ್ಯ. ಮಹಿಳೆಗೆ ತನ್ನದೆ ಕಾರ್ಯಕ್ಷೇತ್ರ, ಕರ್ತವ್ಯ ಗಳಿವೆ. ಹಾಗಾಗಿ ಇಲ್ಲಿ ಅಸಮಾನತೆಯೆನ್ನು ಈಗ ಅಪ್ರಸ್ತುತ ಎಂದರು.
ಎ ಐ ಎ ಎಮ್ ಎಸ್ ಎಸ್ ರಾಜ್ಯಾಧ್ಯಕ್ಷೆ ಅಪರ್ಣಾ ಮಾತನಾಡಿ, ಮಹಿಳೆಯರು ಮತ್ತು ಮಕ್ಕಳಿಗೆ ಆಹಾರ ಭದ್ರತೆ ಕಲ್ಪಿಸ ಬೇಕು. ಸಮಾನ ವೇತನ ಕಾಯ್ದೆ ಪಾವತಿಯಾಗುವಂತಾಗಬೇಕು. ಉತ್ತಮ ಆರೋಗ್ಯ ಸೇವೆ ಒದಗಿಸಬೇಕು, ಭೂರಹಿತ ಕುಟುಂಬಗಳಿಗೆ ಭೂಮಿ ನೀಡಬೇಕು, ಮಹಿಳಾ ನಾಗರೀಕ ಹಕ್ಕುಗಳನ್ನು ರಕ್ಷಿಸಬೇಕಿದೆ ಎಂದು ಒತ್ತಾಯಿಸಿದರು.
ಮಹಿಳೆಯರ ಮೇಲಾಗುತ್ತಿರುವ ವಯಕ್ತಿಕ ಕಿರುಕುಳ, ದೌರ್ಜನ್ಯ ಗಳ ಬಗ್ಗೆ ದೂರು ನೀಡಿದಾಗ ಗಂಭೀರವಾಗಿ ಪರಿಗಣನೆಗೆ ತೆಗೆದುಕೊಂಡು ಕಾನೂನುರೀತ್ಯಾ ಕ್ರಮ ಜರುಗಿಸುವಂತಾಗಬೇಕಿದೆ ಎಂದು ಆಗ್ರಹಿಸಿದರು. ಎಸ್ ಯುಐ(ಸಿ) ಕಾರ್ಯದರ್ಶಿ ಕೆ.ಉಮಾ, ಕಾರ್ಯದರ್ಶಿ ಎಸ್ ಶೋಭಾ, ಉಪಾಧ್ಯಕ್ಷೆ ಎಂ.ಎನ್.ಮಂಜುಳಾ, ಎ.ಶಾಂತಾ ಸೇರಿದಂತೆ ಸಾವಿರಾರು ಮಹಿಳೆಯರು ಭಾಗವಹಿಸಿದ್ದರು.