ಕೋಲಾರ: ವಿಸ್ಟ್ರಾನ್ ಕಂಪನಿಯಲ್ಲಿ ಆಗಿರುವ ಅನಾಹುತಕ್ಕೆ ಕಾರಣವಾಗಿರುವ ಸಮಸ್ಯೆಯನ್ನು ಮೂಲಭೂತವಾಗಿ ಗುರ್ತಿಸಿ ಘಟನೆಗೆ ಕಾರಣಕರ್ತರಾಗಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ ಬಂಧಿಸಲು ಕರವೇ ಒತ್ತಾಯಿಸಿದೆ.
ದುಡಿದ ಶ್ರಮಕ್ಕೆ ಕಾರ್ಮಿಕರಿಗೆ ಸಂಬಳ ನೀಡದೆ ವಂಚಿಸಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ಕುಮಾರ್ ಶೆಟ್ಟಿ ಸಾರಥ್ಯದ ಕೋಲಾರ ಜಿಲ್ಲಾ ಘಟಕವು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಬಹುರಾಷ್ಟ್ರೀಯ ಕಂಪನಿಗಳಿಗೆ ಕೆಂಪು ಹಾಸಿನ ಸ್ವಾಗತ ಕೋರಿ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸುವ ಸರ್ಕಾರ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು, ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಕೆಲಸ ಸಿಗುತ್ತಿದೆಯೇ, ಕಾರ್ಮಿಕರಿಗೆ ಕಾಲಕಾಲಕ್ಕೆ ಸಂಬಂಳ, ಸಾರಿಗೆ ವ್ಯವಸ್ಥೆ ಇತ್ಯಾದಿ ಸೌಲಭ್ಯಗಳು ಇವೆಯೇ ಎಂಬಿತ್ಯಾದಿ ವಿಚಾರಗಳ ಕುರಿತಂತೆ ಕಾಲಕಾಲಕ್ಕೆ ಗಮನ ಹರಿಸಿದ್ದರೆ ಈ ರೀತಿಯ ಘಟನೆಗಳು ಆಗುತ್ತಿರಲಿಲ್ಲವೆಂದು ಅವರು ಬೇಸರ ವ್ಯಕ್ತಪಡಿಸಿದರು.
ಕೋಲಾರ ಜಿಲ್ಲೆಗೆ ಮತ್ತಷ್ಟು ಬಹುರಾಷ್ಟ್ರೀಯ ಕಂಪನಿಗಳು ಬರಬೇಕಾಗಿದ್ದು, ಕೋಟ್ಯಾಂತರ ರೂಪಾಯಿಗಳ ಬಂಡವಾಳ ಹೂಡಿಕೆಯಾಗಬೇಕಾಗಿದೆ. ಆದರೆ, ಇದರ ಜೊತೆ ಜೊತೆಗೆ ಕೈಗಾರಿಕೆಗಳಿಗೆ ಭೂಮಿ ನೀಡಿದವರು, ಸ್ಥಳೀಯ ನಿರುದ್ಯೋಗಿಗಳ ಹಿತವನ್ನು ಸರಕಾರ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ಕಾಪಾಡಬೇಕಾಗುತ್ತದೆ. ಕೈಗಾರಿಕೆ ಆರಂಭ ಮಾಡಿಸಿದ್ದೇ ಸಾಧನೆ ಎಂದು ಹಿಗ್ಗುತ್ತಾ, ಕಾರ್ಖಾನೆಗಳಲ್ಲಿ ಏನಾಗುತ್ತಿದೆಯೆಂಬ ಬಗ್ಗೆ ಗಮನ ಹರಿಸದಿದ್ದರೆ ಈ ರೀತಿಯ ಅನಾಹುತಗಳು ಜರುಗುತ್ತವೆ.