ಹುಬ್ಬಳ್ಳಿ, ಫೆ. 26: ದೇಶದ್ರೋಹಿ ಘೊಷಣೆ ಕೂಗಿದವರ ಪರ ವಕಾಲತ್ತು ವಹಿಸದಿರಲು ನಿರ್ಧರಿಸಿದ ಹುಬ್ಬಳ್ಳಿ ವಕೀಲರ ಸಂಘದ ಪದಾಧಿಕಾರಿಗಳಿಗೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಕೋರ್ಟ್ ಆವರಣದಲ್ಲಿ ಗುಲಾಬಿ ಹೂ ಕೊಟ್ಟು ಅಭಿನಂದಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶದ್ರೋಹಿ ಘೊಷಣೆ ಕೂಗಿದ ವಿದ್ಯಾರ್ಥಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು ಇಲ್ಲವೇ ಅವರನ್ನು ಎನ್ಕೌಂಟರ್ ಮಾಡಬೇಕು. ಇಂತಹ ದೇಶದ್ರೋಹಿಗಳಿಗೆ ಯಾವುದೇ ರಕ್ಷಣೆ ನೀಡುವುದು ಸರಿಯಲ್ಲ. ಬೇರೆ ಭಾಗದಿಂದ ಬಂದ ವಕೀಲರು ಅವರ ಪರ ವಕಾಲತ್ತು ವಹಿಸುತ್ತಿರುವುದು ಸರಿಯಲ್ಲ.
ವಕೀಲ ವೃತ್ತಿಗೆ ಅವರು ಅವಮಾನ ಮಾಡುತ್ತಿದ್ದಾರೆ. ವಕೀಲರೂ ಇಂತಹ ದೇಶದ್ರೋಹ ಪ್ರಕರಣಗಳಿಗೆ ಸಹಕಾರ ನೀಡಿದಂತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಭಾರತೀಯ ಮುಸಲ್ಮಾನರು ಈ ಬಗ್ಗೆ ಯೋಚನೆ ಮಾಡಬೇಕು. ನಿಮ್ಮ ಬಾಯಿಂದ ಪಾಕಿಸ್ತಾನ ಘೊಷಣೆ ಬರುತ್ತಿರುವುದು ತಪ್ಪು ದಾರಿಗೆ ಹೋಗುತ್ತದೆ. ಇದಕ್ಕೆ ಹಿಂದು ಸಂಘಟನೆ ತಕ್ಕ ಉತ್ತರ ನೀಡಲಿದೆ. ನೀವು ಪಾಕಿಸ್ತಾನದ ಮುಸ್ಲಿಮರಲ್ಲ. ಭಾರತೀಯ ಮುಸ್ಲಿಮರು ಎಂಬುದನ್ನು ಮನನ ಮಾಡಿಕೊಳ್ಳಬೇಕು ಎಂದರು.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ದೇಶದ್ರೋಹಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವವರಿಗೆ ತಕ್ಕ ಶಿಕ್ಷೆ ನೀಡುವ ಕಾನೂನು ಜಾರಿಗೆ ತರಬೇಕು ಎಂದು ಮುತಾಲಿಕ ಆಗ್ರಹಿಸಿದರು. ವಕೀಲರ ಸಂಘದ ಅಧ್ಯಕ್ಷ ಅಶೋಕ ಬಳಿಗಾರ, ಪ್ರಧಾನ ಕಾರ್ಯದರ್ಶಿ ಗುರು ಹಿರೇಮಠ, ವಕೀಲರಾದ ಅಶೋಕ ಅಣವೇಕರ, ಸಂಜು ಬಡಸ್ಕರ, ಸಂತೋಷ ರೆಡ್ಡಿ, ಬಜರಂಗದಳ ಸಂಚಾಲಕ ಶಿವಾನಂದ ಸತ್ತಿಗೇರಿ, ಆನಂದ, ಪ್ರಕಾಶ, ಮತ್ತಿತರರು ಇದ್ದರು.