ಕೊಲೊಂಬೊ, ಏ. 30, ನ್ಯೂಸ್ ಎಕ್ಸ್ ಪ್ರೆಸ್: ಶ್ರೀಲಂಕಾದಲ್ಲಿ ಈಸ್ಟರ್ ಏ.21ರಂದು ಸಂಭವಿಸಿದ ಭೀಕರ ಉಗ್ರ ದಾಳಿಯ ಅನಂತರ ಈಗ ಬೌದ್ಧ ಮಂದಿರಗಳಿಗೆ ದಾಳಿ ಭೀತಿ ಎದುರಾಗಿದೆ.
ಮಹಿಳಾ ಆತ್ಮಾಹುತಿ ಬಾಂಬರ್ ಗಳನ್ನು ಬಳಸಿಕೊಂಡು ಬೌದ್ಧ ದೇಗುಲಗಳ ಮೇಲೆ ದಾಳಿಗೆ ಸಂಚು ರೂಪಿಸಲಾಗಿದೆ ಎಂದು ಶ್ರೀಲಂಕಾ ಗುಪ್ತಚರ ದಳ ಮಾಹಿತಿ ನೀಡಿದ್ದು, ಈಸ್ಟರ್ ಸ್ಫೋಟ ನಡೆಸಿರುವ ನ್ಯಾಷನಲ್ ತೌಹೀದ್ ಜಮಾತ್ ನ ಉಗ್ರರೇ ಈ ಸ್ಫೋಟಗಳನ್ನೂ ನಡೆಸುವ ಹುನ್ನಾರ ಮಾಡಿದ್ದಾರೆಂದು ಗುಪ್ತಚರ ಎಚ್ಚರಿಸಿದೆ.
ಕೆಲವೇ ದಿನಗಳ ಹಿಂದೆ ಸೈಂತಮುರುತು ಪ್ರದೇಶದಲ್ಲಿ ಶ್ರೀಲಂಕಾ ಪೊಲೀಸರು ದಾಳಿ ನಡೆಸಿದಾಗ ಬೌದ್ಧರ ಉಡುಪುಗಳು ಪತ್ತೆಯಾಗಿದ್ದವು. ಇದು ತನಿಖಾ ಸಂಸ್ಥೆಗಳಿಗೆ ಅಚ್ಚರಿ ಮೂಡಿಸಿತ್ತು. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದಾಗ ಗಿರಿಯುಲಾ ಎಂಬ ಪ್ರದೇಶದಲ್ಲಿರುವ ಜವುಳಿ ಅಂಗಡಿಯೊಂದರಿಂದ ಮಾ.29ರಂದು 9 ಜೊತೆ ಬೌದ್ಧರ ಉಡುಪುಗಳನ್ನು ಖರೀದಿಸಿದ್ದು ತಿಳಿದುಬಂದಿದೆ. ಈ ಉಡುಪುಗಳನ್ನು ಧರಿಸಿಕೊಂಡ ಮಹಿಳೆಯರು ಬೌದ್ಧ ಮಂದಿರಗಳನ್ನು ಪ್ರವೇಶಿಸುವಂತೆ ಮಾಡಿ, ಆತ್ಮಹತ್ಯಾ ದಾಳಿ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.