ಹಾಸನ: ರಾಜ್ಯದಲ್ಲಿ 8 ಬಾರಿ ಮೈಸೂರು ದಸರಾ ಅಂಬಾರಿಯನ್ನು ಹೊತ್ತು ಅಪಾರ ಜನರ ಪ್ರೀತಿ ಗಳಿಸಿದ್ದ ಅರ್ಜುನ ಆನೆಯ ಸಾವಿನಲ್ಲಿ ಭೀಕರ ಅನ್ಯಾಯವಾಗಿದೆ. ಇನ್ನು ಸಾವಿನ ನಂತರವಾದರೂ ಸೂಕ್ತ ಸ್ಥಳದಲ್ಲಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸುವಂತೆ ಮಾವುತರು, ಸ್ಥಳೀಯ ಜನರು ಆಗ್ರಹಿಸಿದ್ದಾರೆ. ಆದರೆ ಇದಕ್ಕೂ ಒಪ್ಪದ ಅರಣ್ಯಾಧಿಕಾರಿಗಳು ಅರ್ಜುನನ ಸಾವಿನ ನಂತರವೂ ನ್ಯಾಯ ಒದಗಿಸದೇ ಕಾಡಿನಲ್ಲಿ ಗುಂಡಿ ತೋಡಿ ಮುಚ್ಚಲು ಮುಂದಾಗಿದ್ದಾರೆ. ಇದನ್ನು ವಿರೋಧಿಸಿದ ಸ್ಥಳೀಯರ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿದ್ದಾರೆ.
ಕಾಡಾನೆ ಕಾರ್ಯಾಚರಣೆಯ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪಶು ಇಲಾಖೆ ಸಿಬ್ಬಂದಿಯ ಎಡವಟ್ಟಿನಿಂದಾಗಿ ರಾಜ್ಯದ ಹೆಮ್ಮೆಯ ಅರ್ಜುನ ಆನೆ ಬಲಿಯಾಗಿದೆ. ಈಗ ಅರ್ಜುನ ಆನೆಯನ್ನು ಸಕಲೇಶಪುರ ತಾಲ್ಲೂಕಿನ ದಬ್ಬಳ್ಳಿಕಟ್ಟೆ ನೆಡು ತೋಪಿನಲ್ಲಿಯೇ ಅಂತ್ಯಕ್ರಿಯೆ ಮಾಡಲು ಅರಣ್ಯ ಇಲಾಖೆ ಮುಂದಾಗಿದೆ. ಆದರೆ, ಮಾವುತರು ಹಾಗೂ ಸ್ಥಳೀಯ ಜನರು ಅರ್ಜುನ ಆನೆಯ ಮೃತದೇಹವನ್ನು ಸ್ಥಳಾಂತರ ಮಾಡಿ ಅಂತ್ಯಕ್ರಿಯೆ ಮಾಡುವಂತೆ ಒತ್ತಾಯಿಸಿದ್ದಾರೆ.