ಪುಣೆ, ಅ. 13 : ಭಾರತ ತಂಡವು ದಕ್ಷಿಣ ಆಫ್ರಿಕಾದ ವಿರುದ್ಧ 4ನೇ ದಿನವೇ ಗೆಲುವಿನ ಸಂಭ್ರಮ ಕಾಣುವತ್ತ ಹೆಜ್ಜೆ ಹಾಕಿದೆ. ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯ ಡಬಲ್ ಸೆಂಚುರಿ (254 * ರನ್) ಹಾಗೂ ಮಯಾಂಕ್ ಅಗರ್ವಾಲ್ರ (108 ರನ್) ನೆರವಿನಿಂದ 601 ರನ್ ಗಳಿಸಿ ದಕ್ಷಿಣ ಆಫ್ರಿಕಾವನ್ನು 275 ರನ್ಗಳಿಗೆ ಕಟ್ಟಿ ಹಾಕುವ ಮೂಲಕ 326 ರನ್ಗಳ ಮುನ್ನಡೆ ಸಾಧಿಸಿತ್ತು.ಎರಡನೇ ಇನ್ನಿಂಗ್ಸ್ನಲ್ಲಿ ತಾಳ್ಮೆಯುತ ಆಟ ಪ್ರದರ್ಶಿಸಿ ಪಂದ್ಯವನ್ನು ಡ್ರಾ ಮಾಡಿಕೊಳ್ಳಬೇಕೆಂಬ ಲೆಕ್ಕಾಚಾರದಲ್ಲಿದ್ದ ಹರಿಣಗಳ ನಾಯಕ ಡುಪ್ಲೆಸಿಸ್ಗೆ ಆರಂಭದಲ್ಲೇ ಭಾರತದ ವೇಗಿಗಳಾದ ಇಶಾಂತ್ ಶರ್ಮಾ, ಉಮೇಶ್ಯಾದವ್ ದೊಡ್ಡ ಆಘಾತ ನೀಡಿದರು.
ರನ್ ಖಾತೆಯನ್ನು ತೆರೆಯುವ ಮುನ್ನವೇ ಆರಂಭಿಕ ಆಟಗಾರ ಮಕ್ರಮ್ರನ್ನು ಎಲ್ಬಿಡಬ್ಲ್ಯು ಮಾಡಿದ ಇಶಾಂತ್ಶರ್ಮಾಗೆ ಸಾಥ್ ನೀಡುವಂತೆ ಬೌಲಿಂಗ್ ಮಾಡಿದ ಬುರೇನ್ (8 ರನ್, 2 ಬೌಂಡರಿ)ರಿಗೆ ಉಮೇಶ್ ಯಾದವ್ ಪೆವಿಲಿಯನ್ ಹಾದಿ ತೋರಿಸಿದರು.
21 ರನ್ಗಳಿಗೆ ಆರಂಭಿಕರಿಬ್ಬರನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ದಕ್ಷಿಣ ಆಫ್ರಿಕಾಕ್ಕೆ ತುಸು ಚೇತರಿಕೆ ನೀಡುವಂತೆ ಬ್ಯಾಟ್ ಬೀಸಿದ ಡೀನ್ ಎಲ್ಗರ್ (48 ರನ್, 8 ಬೌಂಡರಿ) ಹಾಗೂ ನಾಯಕ ಡುಪ್ಲಿಸಿಸ್ (5 ರನ್) 3ನೆ ವಿಕೆಟ್ಗೆ 49 ರನ್ಗಳ ಜೊತೆಯಾಟ ನೀಡಿದರು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಅಶ್ವಿನ್ ಯಶಸ್ವಿಯಾದ ನಂತರ ಮತ್ತೆ ದಕ್ಷಿಣ ಅಫ್ರಿಕಾ ಇನ್ನಿಂಗ್ಸ್ ಸೋಲಿನ ಭೀತಿಗೆ ಸಿಲುಕಿತು.
ಭೋಜನ ವಿರಾಮದ ವೇಳೆಗೆ 74 ರನ್ಗಳನ್ನು ಗಳಿಸಿ 4 ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಅಫ್ರಿಕಾಕ್ಕೆ ಭೋಜನ ವಿರಾಮದ ಎರಡನೇ ಓವರ್ನಲ್ಲೇ ಸ್ಪಿನ್ನರ್ ರವೀಂದ್ರ ಜಾಡೇಜಾ ಸ್ಫೋಟಕ ಆಟಗಾರ ಕ್ಲಿಂಟನ್ ಡಿ ಕಾಕ್ರನ್ನು ಕ್ಲೀನ್ ಬೌಲ್ಡ್ ಮಾಡುವ ಹರಿಣಗಳ ಬ್ಯಾಟಿಂಗ್ ಜಂಘಾಬಲವನ್ನೇ ಅಡಗಿಸಿದರು.