ಮಾಲೂರು: ಮಹಾಮಾರಿ ಕೊರೋನಾ ದಿನದಿಂದ ದಿನಕ್ಕೆ ತನ್ನ ಕಬಂದ ಬಾಹುಗಳನ್ನು ಚಾಚುತ್ತಿರುವ ಸನ್ನಿವೇಶದಲ್ಲಿ ಮಾಲೂರಿನಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಮರೆತು ರ್ಯಾಲಿ ಮಾಡುವ ಮೂಲಕ ಕೋವಿಡ್ ೧೯ ನಿಯಮಗಳನ್ನು ಉಲ್ಲಂಘಿಸಿದ್ದಾರೆ.
ಶಾಸಕ ಕೆ.ವೈ ನಂಜೇಗೌಡ ಹಾಗೂ ಅವರ ಕುಟುಂಬದ ೬ ಮಂದಿಗೆ ಕೊರೋನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪಟ್ಟಣದ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ೧೦೧ ತೆಂಗಿನ ಕಾಯಿ ಹೊಡಿಯುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು.
ಪಟ್ಟಣದ ಕಾಂಗ್ರೆಸ್ ಕಛೇರಿ ಬಳಿ ಜಮಾಯಿಸಿದ ಬ್ಲಾಕ್ ಕಾಂಗ್ರೆಸ್ ಹಾಗೂ ಯುವ ಕಾರ್ಯಕರ್ತರು ಮಾಸ್ಕ್ ಹಾಗೂ ಸಾಮಾಜಿಕ ಅಂತರ ಇಲ್ಲದೆ ಮಾರಿಕಾಂಬಾ ದೇವಾಲಯದವರೆಗೂ ರ್ಯಾಲಿ ನೆಡೆಸುವ ಮೂಲಕ ಕೋವಿಡ್ ೧೯ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಅಲ್ಲದೆ ರ್ಯಾಲಿ ನಡೆಸಲು ಜನ ಇಲ್ಲದ ಕಾರಣ ತಲೆಗೆ ಇಂತಿಷ್ಟು ಹಣ ಕೊಟ್ಟು ಕಾರ್ಯಕರ್ತರನ್ನು ಕರೆತಂದು ಮಾಸ್ಕ್ ಹಾಗೂ ಸಾಮಾಜಿಕ ಅಂತರ ವಿಲ್ಲದೆ ರ್ಯಾಲಿ ನಡೆಸಿದ್ದಾರೆ.
ಕೊರೋನಾ ಕಾಲಿಟ್ಟಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ರಾಜಕಾರಣಿಗಳು ಕೋವಿಡ್ ನಿಯಮಗಳನ್ನು ಗಾಳಿಗೆ ತೂರುತ್ತಿದ್ದಾರೆ. ಪೊಲೀಸರಿಗೆ ಈ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಇದ್ದರೂ ಜಾಣಕುರುಡತನ ಪ್ರದರ್ಶಿಸುತ್ತಿದ್ದಾರೆ. ಜನ ಸಾಮಾನ್ಯರಿಗೊಂದು ನ್ಯಾಯ, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೊಂದು ನ್ಯಾಯ ?, ಪಟ್ಟಣದಲ್ಲಿ ಮಾಸ್ಕ್ ಇಲ್ಲದೆ ಓಡಾಡುವ ಸಾರ್ವಜನಿಕರಿಗೆ ಪುರಸಭಾ ಅಧಿಕಾರಿಗಳು ದಂಡ ವಿಧಿಸುತ್ತಾರೆ, ಜನ ಸಾಮಾನ್ಯರು ಮಳಿಗೆ ಎದುರು ಗುಂಪು ಕಟ್ಟಿ ನಿಂತರೆ ಪೊಲೀಸರು ಎಚ್ಚರಿಕೆ ನೀಡಿ ಅಥವಾ ಲಾಠಿ ತೋರಿಸೋ ಚದುರಿಸೋದು ನೋಡಿದ್ದೇವೆ. ಇಲ್ಲಿನ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಮಾಸ್ಕ್ ಇಲ್ಲದೆ ಸಾಮಾಜಿಕ ಅಂತರವಿಲ್ಲದೆ ಗುಂಪು ಗುಂಪಾಗಿ ಇದ್ದರು ಪೋಲಿಸ್ ಇಲಾಖೆ ಹಾಗೂ ಪುರಸಭಾ ಅಧಿಕಾರಿಗಳು ಮೌನವಹಿಸಿರುವುದು ಏಕೆ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ. ಕೊರೋನಾ ತಡೆಯಲು ಪ್ರತಿಯೊಬ್ಬರು ಸಹಕರಿಸಿ ನಿಯಮ ಪಾಲಿಸಬೇಕಾಗಿದೆ.